ರಂಗಾಯಣ ನಿರ್ದೇಶಕಿ ಜಯಶ್ರೀ ರಾಜೀನಾಮೆ
ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ರಂಗಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿಯನ್ನು ಅವರು ಸ್ಪಷ್ಟಪಡಿಸಿದ್ದಾರೆ. ರಂಗಾಯಣದ ಕಲಾವಿದರು, ನೌಕರರು ಮತ್ತು ಸಿಬ್ಬಂದಿಗಳ ನಡುವೆ ಒಮ್ಮತವಿಲ್ಲ. ಇದರಿಂದ ಬೇಸರವಾಗಿ ನಿರ್ದೇಶಕಿ ಸ್ಥಾನ ಅನಿವಾರ್ಯವಾಗಿ ರಾಜೀನಾಮೆ ನೀಡುತ್ತಿದ್ದೇನೆ. ರಂಗಾಯಣದ ನಿರ್ದೇಶಕಿಯಾಗಿ ನೇಮಕಗೊಂಡ ನಂತರ ಏನನ್ನಾದರೂ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿದ್ದೆ. ಆದರೆ, ಕೆಲ ಕಲಾವಿದರು ತಮ್ಮ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದರು ಎಂದು ಆರೋಪಿಸಿದರು.
ಇಂತಹ ಅವಮಾನದ ನಡುವೆಯೂ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ. ಬೇರೆಯವರ ಹೇಳಿಕೆಗೆ ಅನುಗುಣವಾಗಿ ಜಯಶ್ರೀ ಬದುಕಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ರಂಗಾಯಣದ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ಮುಂದಿಟ್ಟಿದ್ದೆ. ಆದರೆ, ಅವು ರಂಗಭೂಮಿ, ರಂಗಕರ್ಮಿಗಳ ಅಭಿವೃದ್ಧಿಗೆ ಹೊರತು ವೈಯಕ್ತಿಕ ಬಳಿಕೆಗೆ ಅಲ್ಲ ಎಂದರು.
ರಂಗಾಯಣದ ಆವರಣದಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆ ಅನಾವರಣ ಸಂಬಧದ ಪ್ರಕರಣದಲ್ಲಿ ಕಲಾವಿದರ ಷಡ್ಯಂತ್ರವಿದೆ ಎಂದು ಆರೋಪಿಸಿದ್ದೆ. ಆದರೆ, ಮಾಧ್ಯಮಗಳಲ್ಲಿ ಕಲಾವಿದರ ಕುಚೇಷ್ಟೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಸುಳ್ಳು ಪ್ರಾಮುಖ್ಯತೆ ಪಡೆದುಕೊಂಡಿರುವುದರಿಂದ ಸತ್ಯ ಗೌಪ್ಯವಾಗಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ 3-4 ಬಾರಿ ಕಲಾವಿದರ ಸಭೆ ನಡೆಸಲಾಗಿದೆ. ಆದರೆ, ಕಲಾವಿದರು, ನೌಕರರು ನಡುವೆ ಒಮ್ಮತ ಮೂಡಲಿಲ್ಲ ಎಂದು ಜಯಶ್ರೀ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)