ಜೈನಕಾಶಿಯಲ್ಲಿ ನುಡಿಸಿರಿಯ ಸಂಭ್ರಮ
* ಚಿದಂಬರ ಬೈಕಂಪಾಡಿ, ಮಂಗಳೂರು
ಜೈನಕಾಶಿ ಮೂಡುಬಿದಿರೆ ಆಳ್ವಾಸ್ ನುಡಿಸಿರಿ 2009ಕ್ಕೆ ಸಜ್ಜುಗೊಳ್ಳುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು ನವೆಂಬರ್ 6ರಿಂದ 8ರವರೆಗೆ ಮೂಡುಬಿದಿರೆಯಲ್ಲಿರುವ ವಿದ್ಯಾಗಿರಿಯಲ್ಲಿ ನಡೆಯಲಿದೆ. ಕನ್ನಡದ ಹಿರಿಯ ಸಾಹಿತಿ ಡಾ.ಹಂಪನಾ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೇನೂ ಕಡಮೆ ಅಲ್ಲ ಎನ್ನುವ ರೀತಿಯಲ್ಲಿ ಆಳ್ವಾಸ್ ನುಡಿಸಿರಿ ನಡೆಯುತ್ತದೆ. ಆದ್ದರಿಂದಲೇ ಈ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಯಿಂದ ಸಾಹಿತ್ಯಾಸಕ್ತರು ಬರುತ್ತಾರೆ. ಈ ಬಾರಿಯ ಸಮ್ಮೇಳನದಲ್ಲಿ ಕನ್ನಡ ಮನಸ್ಸು : ಸಮನ್ವಯದೆಡೆಗೆ' ಎನ್ನುವ ವಿಷಯವನ್ನು ಆಯ್ಕೆಮಾಡಿದೆ. ಮೂರೂ ದಿನಗಳ ಕಾಲ ಜರಗುವ ಈ ಸಮ್ಮೇಳನದಲ್ಲಿ ನಾಡಿನ ಪ್ರಮುಖ ವಿದ್ವಾಂಸರು ಪ್ರಬಂಧ ಮಂಡನೆ ಮಾಡಲಿದ್ದು ಅರ್ಥಪೂರ್ಣ ಚರ್ಚೆಗಳಾಗುತ್ತವೆ.
ಮೂಡಬಿದಿರೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ಸ್ವಂತ ನೆಲೆಯಲ್ಲಿ ನುಡಿಸಿರಿ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆಕೊಟ್ಟರು, ಇದು ಆರನೇ ವರ್ಷದ ನುಡಿಸಿರಿ. ನಿತ್ಯವೂ ಇಲ್ಲಿ ಬರೇ ಭಾಷಣ ಅಂದುಕೊಳ್ಳಬೇಡಿ. ಕವಿಸಮಯ ಕವಿನಮನ, ಹಾಸ್ಯಗೋಷ್ಠಿ ಜೊತೆಗೆ ಭರಪೂರ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ನಿರ್ದಿಷ್ಟ ವಿಷಯವನ್ನು ಕೈಗೆತ್ತಿಕೊಂಡು ಕನ್ನಡ ಮನಸ್ಸುಗಳು ಚರ್ಚೆ ಮಾಡುವುದು ಇಲ್ಲಿನ ವಿಶೇಷ.
ಈ ಸಮ್ಮೇಳನದಲ್ಲಿ ಭಾಗವಹಿಸುವವರು ಮುಂಚಿತವಾಗಿ 100 ರೂಪಾಯಿ ಪ್ರತಿನಿಧಿ ಶುಲ್ಕಕೊಟ್ಟು ಹೆಸರು ನೋಂದಾಯಿಸಬೇಕು. ಉಚಿತ ವಸತಿ, ಊಟ ಕೊಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರವೇಶವೂ ಉಚಿತ. ಅತ್ಯಂತ ಅಚ್ಚುಕಟ್ಟಾಗಿ ಜರಗುವ ಈ ಸಮ್ಮೇಳನದಲ್ಲಿ ನಾಡಿನಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಂದಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಒಂದು ಸಂಘಟನೆ ಮಾಡಬೇಕಾದ ಕನ್ನಡಕಟ್ಟುವ ಕೆಲಸವನ್ನು ಮೋಹನ್ ಆಳ್ವರು ಒಬ್ಬಂಟಿಯಾಗಿ ಮಾಡುತ್ತಿದ್ದಾರೆ. ಸ್ವತ: ವೈದ್ಯರಾಗಿರುವ ಆಳ್ವರು ಜನಪದ ಕಲೆ, ಸಂಸ್ಕೃತಿಯ ವಿಚಾರದಲ್ಲಿ ಗಟ್ಟಿಗರು. ಭರತನಾಟ್ಯ ಕಲಾವಿದರೂ ಆಗಿರುವ ಆಳ್ವರು ಗೆಜ್ಜೆಕಟ್ಟಿ ನುಡಿಸಿರಿಯಲ್ಲಿ ಕುಣಿಯುತ್ತಾರೆ. ಮಧ್ಯಮ ವಯಸ್ಸಿನಲ್ಲೂ ಆಳ್ವರು ನರ್ತಿಸುವುದನ್ನು ಕಂಡು ಅನುಭವಿಸಬೇಕು. ಒಂದು ರೀತಿಯಲ್ಲಿ ಮೋಹನ್ ಆಳ್ವರು ತುಳುನಾಡಿನ ಸಾಂಸ್ಕೃತಿಕ ರಾಯಬಾರಿಯೂ ಹೌದು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಮೋಹನ್ ಆಳ್ವರು ನುಡಿಸಿರಿಯ ಮೂಲಕ ಕನ್ನಡದ ಮನಸ್ಸುಗಳನ್ನು ಕಟ್ಟುತ್ತಿದ್ದಾರೆ ನುಡಿಸಿರಿಯ ಮೂಲಕ. ಹೆಚ್ಚಿನ ಮಾಹಿತಿ ಬೇಕಾದರೆ http://alvasnudisiri.blogspot.com ಅಂತರ್ಜಾಲ ಪ್ರವೇಶಿಸಿ.