ಮುನಿರಾಬಾದ್ ಕಾಮಗಾರಿ ಇಲಾಖೆ, ಭಲೇ
ಕಳೆದ ವಾರ ಉಂಟಾದ ತೀವ್ರ ಮಳೆಯಿಂದಾಗಿ 19ನೇ ಮೈಲಿಯ ತುಂಗಭದ್ರಾ ಎಡದಂಡೆ ಕಾಲುವೆ ಬಿರುಕುಗೊಂಡು ಭಾರೀ ಹಾನಿ ಸಂಭವಿಸಿತ್ತು. ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ನೀರಾವರಿ ಇಲಾಖೆಯ ಮುನಿರಾಬಾದ್ ಕೇಂದ್ರ ವಲಯದ ಅಧಿಕಾರಿಗಳು ಸತತ 10 ದಿನಗಳ ಕಾಲ ಕಾಮಗಾರಿಯನ್ನು ನಡೆಸಿ ಕಾಲುವೆಯನ್ನು ದುರಸ್ತಿ ಮಾಡಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆಯು 226 ಕಿ.ಮೀ. ಉದ್ದವಿದ್ದು, ಇದರಿಂದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 6.05 ಲಕ್ಷ ಎಕರೆ ಭೂಮಿಗೆ ನೀರಾವರಿಯಾಗುತ್ತಿದ್ದು ಈ ಕಾಲುವೆಯ ದುರಸ್ತಿ ಕಾರ್ಯ ಎಲ್ಲರ ನಿರೀಕ್ಷೆಗೂ ಮೀರಿ ಅತಿ ವೇಗದಲ್ಲಿ ಮುಗಿದಿರುವುದು ರೈತರಲ್ಲಿ ಸಂತಸ ತಂದಿದೆ.
ಸೆ 30 ಮತ್ತು ಅ. 1 ರಂದು ಕೊಪ್ಪಳ ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಮುಖ್ಯ ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣವನ್ನು ಕ್ರಮೇಣವಾಗಿ ಕಡಿಮೆ ಮಾಡಿದ್ದಾಗ್ಯೂ ಕೂಡ, ಕಾಲುವೆಯ ಎಡಭಾಗದ ಗುಡ್ಡಗಳಿಂದ ಹಾಗೂ ಹಳ್ಳಗಳಿಂದ ಬಂದ ಅಪಾರ ಪ್ರಮಾಣದ ನೀರಿನಿಂದಾಗಿ ಕಾಲುವೆಯ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಕಾಲುವೆಯಲ್ಲಿ ಹರಿಯಿತು. ಇದಲ್ಲದೇ, ಮೈಲ್ 19 ರಲ್ಲಿರುವ ಟನಲ್ ಸಾಮರ್ಥ್ಯಕ್ಕಿಂತ ನೀರು ಹೆಚ್ಚಾಗಿ ಅ. 1ರಂದು ಚೈನ್ 916ರ ಅಕ್ವಡಕ್ಟನ ಕೆಳಬದಿಯ ಬಲಭಾಗದ ಬ್ಯಾಂಕ್ ಮೇಲಿನಿಂದ ಹರಿದು ಕಾಲುವೆಯ ಬ್ಯಾಂಕ್ 50 ಮೀ.ನಷ್ಟು ಉದ್ದಕ್ಕೆ ಹಾಗೂ ಬೆಡ್ನಲ್ಲಿ ಸುಮಾರು 3 ಮೀ.ನಷ್ಟು ಆಳಕ್ಕೆ ಒಡೆದು ಹೋಯಿತು.
ಈ ಸ್ಢಳದಲ್ಲಿ ಬ್ಯಾಂಕ್ನ ಎತ್ತರ10 ಮೀ.ನಷ್ಟಿದೆ. ದುರಸ್ತಿ ಪಡಿಸುವ ಕೆಲಸವನ್ನು ಅ. 2 ರಿಂದ ಆರಂಭಿಸಿ ಹಗಲಿರುಳು ಕೈಗೊಂಡು ಅ. 11ರ ಭಾನುವಾರದ ಹೊತ್ತಿಗೆ ಪೂರ್ಣಗೊಳಿಸಲಾಯಿತು. 12 ರಂದು ಮತ್ತೆ ಕಾಲುವೆಯಲ್ಲಿ ನೀರನ್ನು ಬಿಡಲಾಯಿತು. ಇದರಿಂದಾಗಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 6.05 ಲಕ್ಷ ಎಕರೆ ಅಚ್ಚುಕಟ್ಟಿನಲ್ಲಿ ಬೆಳೆದು ನಿಂತಿದ್ದ ಅಂದಾಜು 1500 ಕೋಟಿ ರೂ. ಮೊತ್ತದ ಬೆಳೆಯನ್ನು ರಕ್ಷಿಸಿ ರೈತರ ಹಿತವನ್ನು ಕಾಪಾಡಲಾಗಿದೆ.
ಈ ದುರಸ್ತಿ ಕಾಮಗಾರಿಯ ಅಂದಾಜು ಮೊತ್ತವು 1.35 ಕೋಟಿ ರೂ.ಗಳಾಗಿರುತ್ತದೆ.ಈ ಕಾಮಗಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಲ್ಲಾ ಸಿಬ್ಬಂದಿಯನ್ನು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದ್ದಾರೆ.'ಪ್ರವಾಹದಿಂದ ಉಂಟಾದ ಹಾನಿಯನ್ನು ಇದೇ ವೇಗದಲ್ಲಿ ಮಾಡಿ ಮುಗಿಸಲು ಈ ಯಶಸ್ಸು ನಮಗೆ ಮತ್ತು ನಮ್ಮ ಸಿಬ್ಬಂದಿಗೆ ಮತ್ತಷ್ಟು ಶಕ್ತಿ ನೀಡಿದೆ" ಎಂದು ಅವರು ತಿಳಿಸಿದ್ದಾರೆ.
(ಏಜೆನ್ಸೀಸ್)