ಇನ್ಫಿ, ಬಯೋಕಾನ್ ನಿಂದ ನೆರವಿಗೆ ಹಸ್ತ
ಪ್ರವಾಹ ಪೀಡಿತರಿಗೆ ನೆರವಾಗುವಂತೆ ಮನವಿ ಮಾಡಲು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಇನ್ಫೋಸಿಸ್ ಕಂಪನಿ ಕಚೇರಿಗೆ ಗುರುವಾರ ತೆರಳಿ ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ನಾರಾಯಣಮೂರ್ತಿ ಹಾಗೂ ಇನ್ಫೋಸಿಸ್ ಸಿಇಓ ಕೆ ಗೋಪಾಲಕೃಷ್ಣ ಅವರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು. ಸಿಎಂ ಜೊತೆಗೆ ಸಂಸದ ಅನಂತಕುಮಾರ್ ಇದ್ದರು.
ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿದ ನಾರಾಯಣಮೂರ್ತಿ ಅವರು ಪ್ರತಿ ಮನೆಗೆ 1 ಲಕ್ಷ ರುಪಾಯಿ ವೆಚ್ಚದಂತೆ ಸುಮಾರು 3000 ಮನೆಗಳನ್ನು ಸಂಸ್ಥೆಯ ವತಿಯಿಂದ ನಿರ್ಮಿಸಿಕೊಡುವುದಾಗಿ ಘೋಷಿಸಿದರು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜಮ್ ದಾರ್ ಶಾ ಕೂಡಾ 3000 ಮನೆಗಳನ್ನು ನಿರ್ಮಿಸಿಕೊಡುವ ವಾಗ್ದಾನ ಮಾಡಿದರು. ವಿಪ್ರೋ ಕಂಪನಿ ಕೂಡಾ ಶೀಘ್ರ ಸಂತ್ರಸ್ಥರ ನೆರವಿಗೆ ಧಾವಿಸುತ್ತೇವೆ ಎಂಬ ಭರವಸೆ ನೀಡಿದೆ. ಆದರೆ, ಎಷ್ಟು ಎನ್ನುವುದು ನಿಖರವಾಗಿ ತಿಳಿಸಿಲ್ಲ. ಈ ಮೂರು ಕಂಪನಿಗಳು ಮಾತ್ರ ಅಧಿಕೃತವಾಗಿ ಘೋಷಿಸಿವೆ. ಉಳಿದ 197 ಕಂಪನಿ ಇನ್ನೂ ಬಾಯಿಬಿಟ್ಟಿಲ್ಲ.
ಸೆಂಚ್ಯೂರಿ ಗ್ರೂಫ್ ಮುಖ್ಯಸ್ಥ ಸತೀಸ್ ರೈ ಮತ್ತು ದಯಾನಂದ ಪೈ ಅವರು 2000 ಮನೆಗಳನ್ನು, ಎಬಿಸಿ ಟ್ರೇಡಿಂಗ್ ಕಂಪನಿ ಮುಖ್ಯಸ್ಥ ಸಿದ್ಧಾರ್ಥ ಅವರು 1000 ಮನೆಗಳನ್ನು, ಬೆಂಗಳೂರು ಮಾರವಾಡಿ ಸಂಘದವರು 1000 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಸರಕಾರಕ್ಕೆ ಭರವಸೆ ನೀಡಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ 5000 ಮನೆಗಳು, ಅಬುದಾಬಿ ಉದ್ಯಮಿ 1000 ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ. ಅಮೆರಿಕದಲ್ಲಿರುವ ಕನ್ನಡ ಸಂಘಗಳು ನೆರವಿಗೆ ಮುಂದೆ ಬಂದಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವರಿಸಿದರು. ತಲಾ ಒಂದೊಂದು ಮನೆ ಒಂದು ಲಕ್ಷ ರುಪಾಯಿ ವೆಚ್ಚದಲ್ಲಿರುತ್ತವೆ.
(ದಟ್ಸ್ ಕನ್ನಡ ವಾರ್ತೆ)