ಮಿತ್ತಲ್ ಅವರೇ ಕರ್ನಾಟಕಕ್ಕೆ ಬನ್ನಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರ್ಸೆಲರ್ ಮಿತ್ತಲ್ ಕಂಪನಿಯ ಮುಖ್ಯಸ್ಥ ಲಕ್ಷ್ಮಿ ಮಿತ್ತಲ್, ಜಾರ್ಖಂಡ ಮತ್ತು ಒರಿಸ್ಸಾದಲ್ಲಿ ಸುಮಾರು 20 ಬಿಲಿಯನ್ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಉಕ್ಕು ಕಂಪನಿಯ ಯೋಜನೆ ಕೈಬಿಡಲಾಗಿದೆ ಎಂದು ಲಂಡನ್ ಮೂಲದ ಬ್ರಿಟನ್ ಮೂಲದ ಫೈನಾನ್ಸಿಯಲ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಲ್ಲಿನ ಸರಕಾರ ಕಂಪನಿಗೆ ಬೇಕಿರುವ ಅಗತ್ಯ ಭೂಮಿ ಒದಗಿಸುವಲ್ಲಿ ವಿಫಲವಾಗಿದೆ. ಮತ್ತು ರೈತರು ಕಂಪನಿಗೆ ಭೂಮಿ ನೀಡಲು ಹಿಂದೇಟು ಹಾಕಿರುವುದು ಲಕ್ಷ್ಮಿ ಮಿತ್ತಲ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕಂಪನಿ ಸ್ಥಾಪನೆಯ ಕಾರ್ಯಗಳು ಕಳೆದ ಎರಡು ವರ್ಷಗಳಿಂದ ಆರಂಭವಾಗಿವೆ. ಕೋಟ್ಯಂತರ ರುಪಾಯಿ ಹಣವೂ ನಷ್ಟವಾಗಿದೆ. ಇಂತಹ ಸಮಯದಲ್ಲಿ ಸರಕಾರ ಮತ್ತು ರೈತರು ಕಂಪನಿಯೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದು ಮತ್ತೊಂದು ಕಾರಣವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಭಾರತದ ಇತರೆ ನಗರಗಳಲ್ಲಿ ಉಕ್ಕು ಕಂಪನಿ ಸ್ಥಾಪನೆಗೆ ಲಕ್ಷ್ಮಿ ಮಿತ್ತಲ್ ಪರಿಶೀಲನೆ ನಡೆಸಿದ್ದಾರೆ, ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಬೇಗ ಎಚ್ಚತ್ತುಕೊಂಡು ಉಕ್ಕು ಕಂಪನಿಯನ್ನು ರಾಜ್ಯಕ್ಕೆ ತರಲು ಯತ್ನಿಸಬೇಕು. ಟಾಟಾ ನ್ಯಾನೋ ಕಾರು ತಯಾರಿಕಾ ಕಂಪನಿಯನ್ನು ರಾಜ್ಯ ತರವಲ್ಲಿ ಸರಕಾರ ವಿಫಲವಾಗಿತ್ತು. ಇದರಲ್ಲಿ ಕೂಡಾ ಹಾಗಾಗುವುದು ಬೇಡ.
ಕೈಗಾರಿಕೆ ಮಂತ್ರಿ ಮುರುಗೇಶ ನಿರಾಣಿಗೆ ಸೂಕ್ತ ನಿರ್ದೇಶನ ನೀಡಿ ಉಕ್ಕು ಕಂಪನಿಯನ್ನು ರಾಜ್ಯಕ್ಕೆ ತರುವ ಎಲ್ಲ ಪ್ರಯತ್ನ ಸರಕಾರದಿಂದ ಆಗಬೇಕು. ಆದರೆ, ರಾಜ್ಯದಲ್ಲಿ ವರುಣನ ಮುನಿಸಿನಿಂದ ಆಗಿರುವ ಆನಾಹುತವನ್ನು ಸರಿಪಡಿಸಿದರೆ ಸಾಕು ಎಂಬ ಸ್ಥಿತಿಯಲ್ಲಿ ಸರಕಾರವಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಬೇರೆಡೆ ಗಮನ ಹರಿಸಿದರೆ, ಪ್ರತಿಪಕ್ಷಗಳು ಸುಮ್ಮನೆ ಬಿಟ್ಟಾರೆಯೇ ... ?
(ಏಜನ್ಸೀಸ್)