ನೆರೆ ಬಗ್ಗೆ ಜ್ಯೋತಿಷಿಗಳೇಕೆ ಭವಿಷ್ಯ ನುಡಿಯಲಿಲ್ಲ?
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಮಚಂದ್ರೇಗೌಡ, ಯಾವೊಬ್ಬ ಜ್ಯೋತಿಷಿ ಕೂಡ ಉತ್ತರ ಕರ್ನಾಟಕ ನೆರೆ ಹಾವಳಿಗೆ ತುತ್ತಾಗುತ್ತದೆಂದು ಭವಿಷ್ಯ ನುಡಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವೈಯಕ್ತಿಕವಾಗಿ ನಾನು ಜ್ಯೋತಿಷ್ಯವನ್ನು ನಂಬುತ್ತೇನೆ. ದೊಡ್ಡ ದೊಡ್ಡ ಜ್ಯೋತಿಷಿಗಳು ಈ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ, ಈ ಪ್ರಮಾಣದಲ್ಲಿ ಮಳೆ ಬಿದ್ದು ಪ್ರವಾಹ ಉಂಟಾಗಲಿದೆ ಎಂದು ಹೇಳಿರಲಿಲ್ಲ ಎಂದು ಗೌಡರು ತಮ್ಮ ಪುರಾಣವನ್ನು ಮುಂದುವರೆಸಿದರು.
ಮೈಸೂರಿನ ಸುತ್ತೂರು ಮಠದಲ್ಲಿ ಸರಕಾರದ ಮೂರು ದಿನಗಳ ಬೈಠಕ್ ಕಾರ್ಯಕ್ರಮವನ್ನು ಟೀಕಿಸುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ರಾಮಚಂದ್ರೇಗೌಡರು, ಸುತ್ತೂರುಮಠದಲ್ಲಿ ನಾವೇನು ಮಾಡಿದೆವು ಎನ್ನುವುದು ಅವರಿಗೇನು ಗೊತ್ತಿದೆ ಅಂತ ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದುರು. ಸುತ್ತೂರಿನಲ್ಲಿ ನಾವು ಕಾಲಹರಣ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ನ್ಯಾ. ಎಸ್ ಆರ್ ನಾಯಕ್ ಆರೋಪ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಆ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದರು. ಬೀದಿಯಲ್ಲಿ ಹೋಗುವ ದಾಸಯ್ಯರ ಮಾತಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಸಚಿವ ಮಹಾಶಯರು ಆಡುವ ಮೂಲಕ ತಮ್ಮ ಸಣ್ಣತನ ತೋರಿಸಿದರು.
ಸಂತ್ರಸ್ತರ ಪರಿಹಾರದ ವಿಚಾರದಲ್ಲಿ ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿದೆ. ವಿರೋಧ ಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ. ಸರಕಾರ ಎಲ್ಲ ಅಗತ್ಯ ಕ್ರಮಕೈಗೊಂಡಿದೆ. ಕೇಂದ್ರದ ನೆರವಿಗೆ ಮನವಿ ಮಾಡಿಕೊಳ್ಳಲಾಗಿದೆ. ಸೂಕ್ತ ಪರಿಹಾರ ಧನಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ರಾಮಚಂದ್ರೇಗೌಡ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)