ವಿಶ್ವ ತುಳು ಸಮ್ಮೇಳನಕ್ಕೆ ಹೀಗೊಂದು ಮುನ್ನುಡಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಂಡ ಕರಾವಳಿಯಲ್ಲಿ ತುಳು ಮಾತೃಭಾಷೆ, ವ್ಯವಹಾರದ ಭಾಷೆ, ಸಂಪರ್ಕದ ಭಾಷೆ. ತುಳು ಕೇವಲ ಭಾಷೆಯಲ್ಲ ಅದು ಇಲ್ಲಿನ ಜನರ ಬದುಕಿನ ಭಾಗವೂ ಹೌದು. ತುಳು ಸಂಸ್ಕೃತಿಯಾಗಿಯೂ ಬೆಳೆದು ಬಂದಿದೆ. ಹಬ್ಬ, ಆಚರಣೆ, ನಂಬಿಕೆ-ನಡವಳಿಕೆ ಹೀಗೆ ಎಲ್ಲವುದರಲ್ಲೂ ವಿಭಿನ್ನತೆ ಇದೆ, ಆದ್ದರಿಂದಲೇ ಇದಕ್ಕೆ ತನ್ನದೇ ಆದ ಐಡೆಂಟಿಟಿ ಇದೆ.
*
ಚಿದಂಬರ
ಬೈಕಂಪಾಡಿ,
ಮಂಗಳೂರು
ದ್ರಾವಿಡ
ಭಾಷೆಯೆಂದೂ
ಕರೆಯಲಾಗುವ
ತುಳುವಿನ
ಬಗ್ಗೆ
ತಾತ್ಸಾರ
ಯಾಕೆಂದರೆ
ಈ
ಭಾಷೆಗೆ
ಸ್ವಂತ
ಲಿಪಿ
ಇಲ್ಲ
ಎನ್ನುವುದು.
ಆದರೆ
ಈ
ಕೊರಗನ್ನೂ
ಸಂಶೋಧಕರು
ನಿವಾರಿಸಿಕೊಟ್ಟಿದ್ದಾರೆ,
ಲಿಪಿ
ಹುಡುಕಿಕೊಟ್ಟು.
ಈ
ಲಿಪಿಯ
ಬಳಕೆ
ಇನ್ನೂ
ಸಾಧ್ಯವಾಗಿಲ್ಲ,
ಇದಕ್ಕೆ
ಅನೇಕ
ಕಾರಣಗಳಿವೆ.
ಇಂಥ ತುಳು ಭಾಷೆ ನಶಿಸುತ್ತಿದೆಯಂತೆ. ಹೀಗೆಂದು ಯುನೆಸ್ಕೋ ವರದಿ ಹೊರಬಿದ್ದಿದೆ. ಅದೇನೇ ಇರಲಿ ಈಗ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಹೇಗೆ ಎನ್ನುವುದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಭಾಷೆ, ನೆಲ-ಜಲ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೂ ಈ ಭಾಷೆ ಉಳಿಯುವಂತೆ ಮಾಡಲು ವಿಶ್ವತುಳು ಸಮ್ಮೇಳನ' ಆಯೋಜಿಸಲಾಗುತ್ತಿದೆ.
ಡಿಸೆಂಬರ್ 10ರಿಂದ 13ರವರೆಗೆ ಉಜಿರೆಯಲ್ಲಿ ನಡೆಯಲಿರುವ ಈ ವಿಶ್ವತುಳು ಸಮ್ಮೇಳನ ತುಳುವರ ಸ್ವಾಭಿಮಾನದ ಸಮ್ಮೇಳನವೂ ಹೌದು. ಇಂಥ ಐತಿಹಾಸಿಕ ಸಮ್ಮೇಳನದ ಸಾರಥ್ಯವಹಿಸಿಕೊಂಡಿರುವವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ. ಧರ್ಮಸ್ಥಳ ಕ್ಷೇತ್ರವನ್ನು ಅಣ್ಣಪ್ಪನ ಆಣತಿಯಂತೆ, ಧರ್ಮದೇವತೆಗಳು ಮತ್ತು ಮಂಜುನಾಥನ ಆಸರೆಯಲ್ಲಿ ಮುನ್ನಡೆಸುತ್ತಿರುವ ಹೆಗ್ಗಡೆಯವರು ಎಲ್ಲರಿಗೂ ಬೇಕಾದವರು ಮಾತ್ರವಲ್ಲ ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಸುಳ್ಳವರು, ಆದರಿಂದಲೇ ಈ ಸಮ್ಮೇಳದ ಬಗ್ಗೆ ಬಹಳಷ್ಟು ನಿರೀಕ್ಷೆ-ಕುತೂಹಲ.
ಕೋಡೆ-ಇನಿ-ಯೆಲ್ಲೆ (ನಿನ್ನೆ-ಇಂದು-ನಾಳೆ) ಎನ್ನುವ ಆಶಯದೊಂದಿಗೆ ಈ ಸಮ್ಮೇಳನ ಜರಗಲಿದೆ. ಸಮ್ಮೇಳನದ ಯಶಸ್ಸಿಗಾಗಿ ಹಲವು ಉಪಸಮಿತಿಗಳನ್ನು ರಚಿಸಲಾಗಿದೆ. ಅವುಗಳಿಗೆ ಅವುಗಳದ್ದೇ ಆದ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಸಮ್ಮೇಳನ ಮಾಡುವುದರಿಂದ ಸಾಧಿಸುವುದೇನು? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ, ಆದರೆ ಇಂಥ ಪ್ರಶ್ನೆಗಳಿಗೆ ಉತ್ತರಕೊಟ್ಟರೂ ಪ್ರಯೋಜನವಿಲ್ಲ. ಒಂದಷ್ಟು ಮಂದಿ ಚಿಂತಕರು ತಮ್ಮ ಚಿಂತನೆಗಳನ್ನು ಹಂಚಿಕೊಂಡು, ಒಂದಷ್ಟು ಮಂದಿಗೆ ಚಿಂತೆ ಹತ್ತಿಸಿದರೆ ಸಮ್ಮೇಳನ ಸಾರ್ಥಕ. ಪಾಶ್ಚಾತ್ಯ ಸಂಸ್ಕೃತಿಗಳ ದಾಳಿಯಿಂದ ನಮ್ಮ ಭಾಷೆ, ಸಂಸ್ಕೃತಿ ತತ್ತರಿಸುತ್ತಿದೆ. ಮನೆಯಲ್ಲೇ ಅಕ್ಕಿ, ಉದ್ದಿನಬೇಳೆಯನ್ನು ರುಬ್ಬಿ ದೋಸೆ, ಇಡ್ಲಿ ಮಾಡುವ ಬದಲು ರೆಡಿಮಿಕ್ಸ್ ತಂದು ರಿಲ್ಯಾಕ್ಸ್ ಆಗುತ್ತೇವೆ. ಶಾವಿಗೆ ತಿನ್ನಲು ಮುಖತಿರುಗಿಸುವ ಮಕ್ಕಳು ಮ್ಯಾಗಿ ಅಂದರೆ ಸಾಕು ಆಗಸವೇ ಕೈಗೆಸಿಕ್ಕಿದಷ್ಟು ಖುಶಿಪಡುತ್ತವೆ. ಗಂಜಿ, ರಾಗಿ ಮಣ್ಣಿ ಅಥವಾ ಅಂಬಲಿ ಕುಡಿಯಲು ಒಪ್ಪದ ಮಕ್ಕಳು ಪಿಜ್ಜಾ ಸವಿಯಲು ಪೀಡಿಸುತ್ತವೆ- ಇವು ವಾಸ್ತವ ಅಲ್ಲವೇ? ಆದ್ದರಿಂದ ನಾವೆಲ್ಲಿ ಎಡವಿದೆವು-ಮುಂದೇನು ಮಾಡಬೇಕು ಎನ್ನುವುದನ್ನು ಚಿಂತಿಸಲು ಸಕಾಲ. ಇನ್ನೂ ಮೌನವಾಗಿದ್ದರೆ ನಮ್ಮ ಊರುಗಳಿಗೂ ಅಮೇರಿಕಾ, ಜರ್ಮನ್, ಜಪಾನ್, ಥೈಲ್ಯಾಂಡ್ ದೇಶದ ತಿಂಡಿಗಳ ಹೆಸರಿಟ್ಟರೂ ಅಚ್ಚರಿಯಿಲ್ಲ.
ಈ ದೇಶಗಳ ಒಳ್ಳೆಯತನವನ್ನು ಅರಗಿಸಿಕೊಳ್ಳಬೇಕೇ ಹೊರತು ಆ ದೇಶಗಳ ಸಂಸ್ಕೃತಿಯೊಳಗೆ ಲೀನವಾಗುವುದಲ್ಲ. ಈ ಎಚ್ಚರಿಕೆಯನ್ನು ಮೂಡಿಸಲು ವಿಶ್ವತುಳುಸಮ್ಮೇಳನ ನಾಂದಿಯಾಗುತ್ತದೆ. ಯಾಕೆಂದರೆ ಕರಾವಳಿ ಮೂಲದ ಜನರು ಜಗತ್ತಿನ ಮೂಲೆ ಮೂಲೆಗಳಲ್ಲಿದ್ದಾರೆ. ಅವರ ಬೇರುಗಳು ಈ ನೆಲದಿಂದ ಕಳಚಿಕೊಳ್ಳುತ್ತಿವೆ. ಇದನ್ನು ತಪ್ಪಿಸಲು ಮತ್ತು ಹೊಸಬೀಜಗಳನ್ನು ಈ ಮಣ್ಣಿನಲ್ಲಿ ಬಿತ್ತಿ ಬೆಳೆಸಲು ಸಮ್ಮೇಳನ ನೆರವಾಗುತ್ತದೆನ್ನುವ ಆಶಯ.
ಸಮ್ಮೇಳನ ಮತ್ತೊಂದು ಜಾತ್ರೆ ಎನ್ನುವವರೂ ಇದ್ದಾರೆ. ನಾವು ಬದುಕುತ್ತಿರುವುದೂ ಕೂಡಾ ಸಂತೆಯಲ್ಲಿ ಎನ್ನುವ ಕಿರುಮಾತು ಅವರಿಗೆ. ಸಂತೆಯೊಳಗೆ ಸುತ್ತಾಡುತ್ತಲೇ ಕಳೆದುಹೋಗಿರುವ-ಕಳೆದುಹೋಗುತ್ತಿರುವ ಸ್ವಂತಿಕೆ,ಸ್ವಾಭಿಮಾನವನ್ನು ಮರಳಿಪಡೆಯುವ ಹಾಗೂ ಇರುವುದು ಕಳೆದು ಹೋಗದಂತೆ ನಿಗಾವಹಿಸುವ ಕುರಿತು ಚಿಂತಿಸೋಣ.