ಮೈಸೂರಿನಲ್ಲಿಯೂ ತಿರುವಳ್ಳುವರ್ ಪ್ರತಿಮೆ!
ಕರವೇ ಕಾರ್ಯಕರ್ತರ ತೀವ್ರ ಪ್ರತಿಭಟನೆಯ ಪರಿಣಾಮ ಪ್ರತಿಮೆ ಮೈಸೂರು ಗಡಿ ದಾಟಿ ಬೆಂಗಳೂರಿಗೆ ರವಾನೆಯಾಗಿದೆ. ಮೈಸೂರು ದಸರಾ ನಿಮಿತ್ತವಾಗಿ ಸ್ತಬ್ಧ ಚಿತ್ರಕ್ಕಾಗಿ ಪ್ರತಿಮೆ ತರಲಾಗಿತ್ತು. ವಿವಾದ ಸೃಷ್ಟಿಸಿದ ಕಿಡಿಗೇಡಿಗಳ ಬಗ್ಗೆ ತನಿಖೆ ನಡೆಸುತ್ತೇವೆಂದು ರಂಗಾಯಣದ ನಿರ್ದೇಶಕಿ ಬಿ ಜಯಶ್ರೀ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ, ದಸರಾ ಮೆರವಣಿಗೆಗೆ ತಿರುವಳ್ಳುವರ್ ಪ್ರತಿಮೆ ಬಂದಿದ್ದು ಎಂದು ಅರಿಯದ ಮುಖ್ಯಮಂತ್ರಿ ಯಡಿಯೂರಪ್ಪ, ಎಂತಹ ವಿರೋಧ ಬಂದರೂ ನಾವು ಜಗ್ಗುವುದಿಲ್ಲ, ರಂಗಾಯಣ ಆವರಣದಲ್ಲೇ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿಯೇ ಸಿದ್ದ ಎಂದು ಬೆಂಗಳೂರಿನಲ್ಲಿ ಶುಕ್ರವಾರ ಹೇಳಿಕೆ ನೀಡಿ ಕನ್ನಡಿಗರ ಸಹನೆಯನ್ನು ಕೆಣಕುವ ಕೆಲಸಕ್ಕೆ ಕೈ ಹಾಕಿದ್ದರೆ. ಕರವೇ ವಿರೋಧಕ್ಕೆ ಸರಕಾರ ಮಣಿಯದು, ಉಭಯ ರಾಜ್ಯಗಳ ನಡುವಿನ ಸೌಹಾರ್ದ ಕದಡುವ ಕೆಲಸಕ್ಕೆ ಕೈಹಾಕಿದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ.
ಮೈಸೂರಿನಲ್ಲಿಯೂ ತಿರುವಳ್ಳುವರ್ ಪ್ರತಿಮೆ ಪ್ರತಿಷ್ಠಾಪಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳರನ್ನು ಓಲೈಸಲು ಹೊರಟಿದ್ದಾರೆ. ಇದರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳಲು ಕರವೇ ಹಿಂಜರಿಯುವುದಿಲ್ಲ ಎಂದು ರಕ್ಷಣಾ ವೇದಿಕೆಯ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)