ದಿಗ್ಬಂಧನಕ್ಕೆ ಮೊದಲೇ ಕಾಂಗ್ರೆಸ್ ನಾಯಕರ ಬಂಧನ
ಆರ್ ವಿ ದೇಶಪಾಂಡೆ, ಉಗ್ರಪ್ಪ ಮುಂತಾದವರನ್ನು ಬಸವೇಶ್ವರ ವೃತ್ತದಲ್ಲಿ ಬಂಧಿಸಲಾಯಿತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ತೇಜಸ್ವಿನಿ ಮುಂತಾದವರನ್ನು ಇಂಡಿಯನ್ ಎಕ್ಸ್ ಪ್ರೆಸ್ ಬಳಿ ಬಂಧಿಸಲಾಗಿದೆ. ಕಾಂಗ್ರೆಸ್ ನಾಯಕರು ಮಾತ್ರವಲ್ಲ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕೂಡ ಬಂಧಿಸಲಾಗಿದೆ.
ಕಾಂಗ್ರೆಸ್ ಮುಖಂಡರ ಬಂಧನಕ್ಕೆ ಕೆಂಡಾಮಂಡಲರಾಗಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಯಡಿಯೂರಪ್ಪ ಅವರನ್ನು ಹಿಟ್ಲರ್ ಅವರಿಗೆ ಹೋಲಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದೇ ತಪ್ಪೆ? ಸರಕಾರಕ್ಕೇನಾದರು ಮಾನ ಮಾರ್ಯಾದೆ ಇದೆಯಾ? ಇದೊಂದು ರ್ಯಾಸ್ಕಲ್ ಸರಕಾರ, ಯಡಿಯೂರಪ್ಪ ಅವರೇನು ಸಾಯುವವರೆಗೂ ಮುಖ್ಯಮಂತ್ರಿ ಆಗಿ ಇರುತ್ತಾರಾ? ಬಂಧನವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೊಂದು ಹೊಲಸು ಸರಕಾರ, ಕೆಟ್ಟ ಪೊಲೀಸ್ ವ್ಯವಸ್ಥೆ, ನಾವು ಇನ್ನೂ ಪ್ರತಿಭಟನೆ ಆರಂಭಿಸಿಲ್ಲ, ವಿಧಾನಸೌಧ ಬಳಿ ಬಂದ ತಕ್ಷಣ ಎಲ್ಲರನ್ನೂ ಬಂಧಿಸುವುದು ಎಲ್ಲಿಯ ನ್ಯಾಯ? ಕಾಂಗ್ರೆಸ್ ಕಚೇರಿಗೆ ತೆರಳುತ್ತಿರುವ ಮುಖಂಡರನ್ನು ಬಂಧಿಸುವುದು ಸರಿಯೇ? ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆಯೇ? ಇದು ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿಯದ್ದು ಕೊಳಕು ಸರಕಾರ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ನಾವು ಬೆಂಕಿ ಹಚ್ಚಲು ಇಲ್ಲಿಗೆ ಬಂದಿಲ್ಲ. ನಾವು ಕೊಲೆ ಮಾಡಿದ್ದೇವಾ? ನಾವು ಭಯೋತ್ಪಾದಕರಾ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.
ಕಾರ್ಯಕರ್ತರು ಮತ್ತು ಕೆಲ ಶಾಸಕರ ಮೇಲೆ ಪೊಲೀಸರು ಕೈಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ತೇಜಸ್ವಿನಿ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಯ ವಿರುದ್ಧ ಮೇರುಸ್ವರದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು.
(ದಟ್ಸ್ ಕನ್ನಡ ವಾರ್ತೆ)