ಮಾಜಿ ಸಚಿವ ಡಿ.ಟಿ.ಜಯಕುಮಾರ್ ಇನ್ನಿಲ್ಲ
ಸುಗುಣ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಡಾಲರ್ಸ್ ಕಾಲೋನಿಯ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗಿದೆ. ಡಿ ಟಿ ಜಯಕುಮಾರ್ ಅವರ ಅಂತ್ಯಕ್ರಿಯೆ ಅವರ ತವರೂರಾದ ಚನ್ನಪಟ್ಟಣದ ದೇವರಹಳ್ಳಿಯಲ್ಲಿ ಭಾನುವಾರ ನೆರವೇರಲಿದೆ.
ಡಿ ಟಿ ಜಯಕುಮಾರ್ ಅವರು 1978ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡಿದ್ದರು. ಅವರು ನಂಜನಗೂಡು ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ನಂತರ ಅವರು ಕಾಂಗ್ರೆಸನ್ನು ತೊರೆದು ಬಿಎಸ್ ಪಿಗೆ ಸೇರ್ಪಡೆಗೊಂಡಿದ್ದರು. 2008ರಲ್ಲಿ ಬಿಎಸ್ ಪಿಯಿಂದ ಸ್ಪರ್ಧಿಸಿ ಸೋತಿದ್ದರು.
ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿದ ಜಯಕುಮಾರ್ ನಂತರ ಬಿಎಸ್ ಪಿ, ಜೆಡಿಎಸ್ ಪಕ್ಷಗಳಿಗೆ ಸೇರ್ಪಡೆಯಾಗಿದ್ದರು. ಜೆಡಿಎಸ್ ನಲ್ಲಿ ತಮಗೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಅವರು ಮನನೊಂದು ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ತೋಟಗಾರಿಕೆ ಮತ್ತು ವಸತಿ ಸಚಿವರಾಗಿ ಹಾಗೂ ಮೂರು ಬಾರಿ ಶಾಸಕರಾಗಿ ಡಿ.ಜಿ.ಜಯಕುಮಾರ್ ಸೇವೆ ಸಲ್ಲಿಸಿದ್ದರು.
ದಿವಂಗತ ದೇವರಾಜ ಅರಸು ಅವರಿಂದ ಜಯಕುಮಾರ್ ಪ್ರಭಾವಿತರಾಗಿದ್ದರು. ದಲಿತ, ಹಿಂದುಳಿದ ಜನಾಂಗದ ಧ್ವನಿಯಾಗಿ ಜಯಕುಮಾರ್ ಮುಂಚೂಣಿಯಲ್ಲಿರುತ್ತಿದ್ದರು. ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಜ್ಜನ ರಾಜಕಾರಣಿಯನ್ನು ಕಳೆದುಕೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ವಕ್ತಾರ ವೈಎಸ್ ವಿ ದತ್ತ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)