ಪರಾರಿಯಾದ ಪಾದ್ರಿ ರೆಸಾರ್ಟ್ ನಲ್ಲಿ ಪತ್ತೆ
ಬೆಂಗಳೂರು, ಸೆ.19 : ಅಪ್ರಾಪ್ತ ವಯಸ್ಸಿನ ಶಿಷ್ಯೆಯ ಜೊತೆ ಪರಾರಿಯಾಗಿದ್ದ ಪಾದ್ರಿ ಕೇರಳದ ರೆಸಾರ್ಟ್ ಒಂದರಲ್ಲಿ ಪತ್ತೆಯಾಗಿದ್ದಾನೆ. ಪಾದ್ರಿ ತನ್ನ ಮಾವನೊಂದಿಗೆ ಮೊಬೈಲ್ ನಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಹೇಬಿಯಸ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಪೀಠ ಸೆ.15 ರಂದು ಹುಡುಗಿಯ ಪೋಷಕರನ್ನು ಕರೆತರುವಂತೆ ಆದೇಶಿಸಿತ್ತು ಮತ್ತು ತನಿಖೆ ಚುರುಕು ಗೊಳಿಸುವಂತೆ ಆದೇಶ ನೀಡಿತ್ತು. ತನಿಖೆ ಮುಂದುವರಿಸಿದ್ದ ಪೊಲೀಸರಿಗೆ ಪಾದ್ರಿ ತನ್ನ ಸೋದರ ಮಾವನೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ವಿಚಾರ ತಿಳಿಯಿತು. ಜತೆಗೆ, ಆತ ಕೇರಳದ ಮುನ್ನಾರ್ ಬಳಿ ರೆಸಾರ್ಟ್ ಒಂದರಲ್ಲಿ ಶಿಷ್ಯೆಯೊಂದಿಗೆ ದಿನ ಕಳೆಯುತ್ತಿದ್ದಾನೆಂದು ತಿಳಿದುಬಂತು.
ವಿಚಾರಣೆ ನಡೆಸಿದ ನ್ಯಾಯಪೀಠ ಅವರಿಬ್ಬರನ್ನೂ ಕರೆತಂದು ಪಾದ್ರಿಯನ್ನು ಬಂಧಿಸ ಬೇಕೆಂದು ಆದೇಶ ನೀಡಿತು. ಅಲ್ಲದೆ ಅಪ್ರಾಪ್ತ ವಯಸ್ಕಳಾದ ಕಾರಣ ಈಗಲೇ ಆಕೆಯ ಮದುವೆ ಮಾಡಬಾರದು ಮತ್ತು ಮಾನಸಿಕ ಅಥವಾ ದೈಹಿಕ ಹಿಂಸೆ ನೀಡಬಾರದು ಎಂದು ಪೋಷಕರಿಗೆ ನ್ಯಾಯಪೀಠ ನಿರ್ದೇಶಿಸಿದೆ.
(ದಟ್ಸ್ ಕನ್ನಡ ವಾರ್ತೆ)