ಗುಂಡ್ಯಾ ಯೋಜನೆಗೆ ಕೇಂದ್ರದ ಕೊಕ್ಕೆ
ಕರ್ನಾಟಕ ಸರಕಾರ ಶಂಕುಸ್ಥಾಪನೆ ನೆರವೇರಿಸಿದ ಕೂಡಲೇ ಅದಕ್ಕೆ ಅನುಮತಿ ಸಿಕ್ಕಿದೆ ಎಂದರ್ಥವಲ್ಲ. ಗುಂಡ್ಯಾದಂತಹ ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತಹ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದೇನೆ. ಘಟ್ಟ ಪ್ರದೇಶದಲ್ಲಿ ಇಂತಹ ಯೋಜನೆ ಕೈಗೊಳ್ಳುವುದರಿಂದ ಭಾರಿ ಪ್ರಮಾಣದ ಪ್ರದೇಶ ಮುಳುಗಡೆಯಾಗುತ್ತಿದೆ ಎಂದು ಕೇಂದ್ರದ ಪರಿಸರ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ಗುರುವಾರ ತಿಳಿಸಿದ್ದಾರೆ.
ವಿನಾಶದ ಅಂಚಿನಲ್ಲಿರುವ ನಾಲ್ಕು ಜೀವ ವೈವಿಧ್ಯಗಳ ತಾಣಗಳ ಪೈಕಿ ಪಶ್ಚಿಮಘಟ್ಟವೂ ಒಂದು. ವಿದ್ಯುತ್ ಯೋಜನೆಗಳ ಪ್ರತಿಕೂಲ ಪರಿಣಾಮಗಳಿಂದ ನಾವು ಈ ಘಟ್ಟವನ್ನು ರಕ್ಷಿಸಬೇಕಿದೆ. ಪರಿಸರ ಭದ್ರತೆಯನ್ನೂ ಲೆಕ್ಕಿಸದೆ ವಿದ್ಯುತ್ ಉತ್ಪಾದನೆಗೆ ಮುಂದಾಗಬಾರದು ಎಂದು ಅವರು ಸಲಹೆ ನೀಡಿದರು. ಕಳೆದ ಮೇ ತಿಂಗಳಲ್ಲಿ ಸಕಲೇಶಪುರ ತಾಲ್ಲೂಕು ಎತ್ತೂರು ಹೋಬಳಿ ಹೊಂಗಡದಲ್ಲಿ 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲು ಕರ್ನಾಟಕ ವಿದ್ಯುತ್ ನಿಗಮ ಉದ್ದೇಶಿಸಿತ್ತು.
(ದಟ್ಸ್ ಕನ್ನಡ ವಾರ್ತೆ)