ಸದನದಲ್ಲಿ 'ಮೆಟ್ಟು' ಎಬ್ಬಿಸಿದ ಕೋಲಾಹಲ
ಬರ ಕುರಿತು ಯಡಿಯೂರಪ್ಪ ಹಾಗೂ ಕರುಣಾಕರರೆಡ್ಡಿ ಉತ್ತರಿಸಿದ ಬಳಿಕ, ಸಚಿವರಾದ ಬಿ ಎನ್ ಬಚ್ಚೇಗೌಡ ಮತ್ತು ಆರ್ ಅಶೋಕ್ ಅವರು ಕುಮಾರಸ್ವಾಮಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು. ಕುಮಾರಸ್ವಾಮಿ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು. ನೋಟಿಸ್ ಜಾರಿ ಮಾಡಬೇಕು ಎಂದು ಬಚ್ಚೇಗೌಡ ಒತ್ತಾಯಿಸಿದರು. ನಂತರ ಮಧ್ಯೆ ಪ್ರವೇಶಿಸಿದ ಸಿದ್ದರಾಮಯ್ಯ, ಮಾನ ಹಾನಿಯಾಗುವಂತ ಹೇಳಿಕೆ ಕೊಟ್ಟಿದ್ದರೆ ಕೇಸು ದಾಖಲಿಸಿ, ಕುಮಾರಸ್ವಾಮಿ ಸದನದ ಸದಸ್ಯರಲ್ಲ. ಹೀಗಾಗಿ ಚರ್ಚೆ ಅನಗತ್ಯ. ಹಕ್ಕುಚ್ಯುತಿ ಮಂಡಿಸುವಂತಿಲ್ಲ ಎಂದರು.
ಇಸ್ಟೀಟ್ ಆಟದಲ್ಲಿ ಎಲೆಗಳನ್ನು ಒಂದೊಂದಾಗಿ ಎಸೆಯುವಂತೆ ಸತ್ಯ ಹರಿಶ್ಚಂದ್ರನ ಮಕ್ಕಳ ಹಗರಣಗಳನ್ನು ಒಂದರ ನಂತರ ಮತ್ತೊಂದು ಬಯಲಿಗೆಳೆಯುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುಡುಗಿದ್ದಾರೆ.
ಕಲ್ಲಿದ್ದಲು ಖರೀದಿ ಹಗರಣ ಸಂಬಂಧ ತಮ್ಮ ವಿರುದ್ಧ ಟೀಕಿಸಿರುವ ಕುಮಾರಸ್ವಾಮಿ ಹಾಗೂ ರೇವಣ್ಣ ಬಗ್ಗೆ ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಕುಮಾರಸ್ವಾಮಿ ಮತ್ತು ರೇವಣ್ಣ ಕಲ್ಲಿದ್ದಲು ಹಗರಣದ ರೂವಾರಿಗಳು ಎಂದು ತಿರುಗೇಟು ನೀಡಿದ ಯಡಿಯೂರಪ್ಪ ಹಗರಣಗಳನ್ನು ಬಯಲಿಗೆಳೆಯುವ ಕಾರ್ಯ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಈಗಷ್ಟೇ ಆರಂಭವಾಗಿದೆ ಎಂದರು.
ಹಗರಣ ನ್ಯಾಯಾಂಗ ತನಿಖೆ ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ. ತನಿಖೆ ಶೀಘ್ರದಲ್ಲೇ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಲಾಗುವುದು. ರೇವಣ್ಣ ಕೆಪಿಸಿಎಲ್ ಅಧ್ಯಕ್ಷರಾಗಿದ್ದಾಗ ಟ್ರಾನ್ಸ್ ಫಾರ್ಮರ್ ಖರೀದಿ ಬಗ್ಗೆಯೂ ನ್ಯಾಯಾಂಗ ತನಿಖೆ ನಡೆಯಲಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)