ದೇವೇಗೌಡರೇ ಗೊಂದಲ ಹೇಳಿಕೆ ನಿಲ್ಲಿಸಿ : ಸಿಎಂ
ಇತ್ತೀಚೆಗೆ ರಾಜ್ಯ ಸರಕಾರದ ವಿರುದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ಮತ್ತು ಹೆಬ್ಬಗೋಡಿಯ ಎಸ್ಎಫ್ಎಸ್ ಚರ್ಚ್ ಮೇಲೆ ದಾಳಿ ನಡೆದ ನಂತರವಂತೂ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿಕೊಂಡು ಟೀಕೆ ಪ್ರಹಾರ ನಡೆಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇವೇಗೌಡರು ಗೊಂದಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ದೇವೇಗೌಡ ಅವರು ಪುತ್ರ ವಾತ್ಸಲ್ಯ ಬಿಡಬೇಕು. ಮಾಜಿ ಪ್ರಧಾನಿ ಆಗಿರುವ ಅವರು ತಮ್ಮ ಘನತೆಗೆ ತಕ್ಕನಾಗಿ ನಡೆದುಕೊಳ್ಳಬೇಕು. ಬುದ್ದಿಮಾತು ಹೇಳಬೇಕೇ ವಿನಃ ಸುಳ್ಳು ಆಪಾದನೆ ಮಾಡುವುದನ್ನು ಬಿಡಬೇಕು. ರಾಜ್ಯದ ಅಭಿವೃದ್ಧಿ ಸಲಹೆ ನೀಡುವುದಾದರೆ ಸ್ವೀಕರಿಸಲು ಸಿದ್ಧ. ಅದನ್ನು ಬಿಟ್ಟು ರಾಜ್ಯದ ನೆಮ್ಮದಿ ಕದಡುವ ಯತ್ನ ಮಾಡಬಾರದೆಂದು ಕಿವಿಮಾತು ಹೇಳಿದರು.
ರಾಜ್ಯದ ಸ್ಥಿತಿ ಕಂಡರೆ ಅತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ ಎಂಬ ದೇವೇಗೌಡರು ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯಿಸಿದ ಅವರು, ಅವರ ಈ ಹೇಳಿಕೆ ರೈತರ ಅತ್ಮಹತ್ಯೆಗೆ ಮತ್ತಷ್ಟು ಪ್ರಚೋದನೆ ನೀಡುತ್ತಿದೆ ಎಂದರು. ರೈತರ ಬಗ್ಗೆ ದೇವೇಗೌಡರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ರೈತರ ಅತ್ಮಸ್ಥೈರ್ಯವನ್ನೇ ಕುಸಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)