ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ: ಸಾಂಗ್ಲಿಯಾನಾ
ಬೆಂಗಳೂರು, ಸೆ. 13 : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಜಿ ಸಂಸದ ಎಚ್.ಟಿ. ಸಾಂಗ್ಲಿಯಾನಾ ಆರೋಪಿಸಿದರು.
ಚರ್ಚ್ ಮೇಲಿನ ದಾಳಿ ಮತ್ತೆ ಮುಂದುವರಿದಿದ್ದು, ಅಲ್ಪಸಂಖ್ಯಾತರ ಸ್ವತ್ತು, ಜೀವಕ್ಕೆ ರಕ್ಷಣೆ ಇಲ್ಲವೆಂಬ ಭಾವನೆ ಬಲವಾಗುತ್ತಿದೆ. ರಾಜ್ಯ ಸರಕಾರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.
ವರ್ಷದ ಹಿಂದೆ ನಡೆದ ಚರ್ಚ್ ದಾಳಿಗೆ ಕಾರಣರಾದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ನ್ಯಾಯಮೂರ್ತಿ ಸೋಮಶೇಖರ್ ಆಯೋಗ ರಚಿಸಲಾಗಿದ್ದರೂ, ಇದುವರೆಗೆ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಘಟನೆಯ ಹಿಂದಿರುವ ಶಕ್ತಿಗಳಿಗೆ ಸರಕಾರ ಕುಮ್ಮಕ್ಕು ನೀಡುತ್ತಿದೆ. ಅಪರಾಧ ಕೃತ್ಯ ನಡೆಸುವವರ ಮೇಲೆ ಗುಂಡಿನ ದಾಳಿ ನಡೆಸುವಂತೆ ಆದೇಶ ನೀಡಿರುವುದು ಸರಿಯಲ್ಲ. ಇಂತಹ ಸನ್ನಿವೇಶಗಳಲ್ಲಿ ಯಾವಾಗಲೂ ಅಮಾಯಕರೇ ಬಲಿಯಾಗುತ್ತಾರೆ'ಎಂದರು.
ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ರಾಜಕೀಯ ಇಚ್ಛಾಶಕ್ತಿ ಸರಕಾರಕ್ಕಿಲ್ಲ. ದೇವಾಲಯಗಳ ದುರಸ್ತಿಗೆ 100 ಕೋಟಿ ರೂ. ನೀಡಿರುವ ಸರಕಾರಕ್ಕೆ ಅಪರಾಧಿಗಳ ಪತ್ತೆಗೆ ಕೋಟಿ ರೂ.ವೆಚ್ಚ ಮಾಡಲು ಮನಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಕಾವಿಧಾರಿಗಳು ಮನೆಮನೆಗೆ ತೆರಳಿ ಕ್ರೈಸ್ತ ಧರ್ಮದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ'ಎಂದು ಬೆನೆಡಿಕ್ಟ್ ಬಾಲು ಆಪಾದಿಸಿದರು. ಹೆಬ್ಬಗೋಡಿ ಚರ್ಚ್ನ ಮೇಲಿನ ದಾಳಿ ಪ್ರಕರಣವನ್ನು ಸಿಐಡಿಗೆ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮವನ್ನು ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘ ಸ್ವಾಗತಿಸಿದೆ.
(ದಟ್ಸ್ ಕನ್ನಡ ವಾರ್ತೆ)