ಸ್ವರ್ಣವಲ್ಲಿ ಸ್ವಾಮೀಜಿಗಳಿಂದ ಭಗವದ್ ಗೀತಾ ಕ್ವಿಜ್
ಆಗಸ್ಟ್ 2ರಂದು ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ISKCON ದೇವಸ್ಥಾನದಿಂದ ರಾಜಾಜಿನಗರ 1ನೇ ಹಂತದ ವಾಣಿ ವಿದ್ಯಾಕೇಂದ್ರದವರೆಗೆ 80 ಮಕ್ಕಳಿಂದ ಗೀತೆಯ ಹನ್ನೆರಡನೆಯ ಅಧ್ಯಾಯ ಭಕ್ತಿಯೋಗದ ಪಠನದೊಂದಿಗೆ ನಡೆದ ವಿಶಿಷ್ಟ ಕಾಲ್ನಡಿಗೆಯಲ್ಲಿ ಗೀತಾಯಾತ್ರೆಯೊಂದಿಗೆ "ಗೀತಾ ದ್ಯುತಿ 2009" ಪ್ರಾರಂಭವಾಗಿತ್ತು.
ಆಗಸ್ಟ್ 2ರಂದು ಪ್ರಾರಂಭವಾದ ಮೊದಲ ಸುತ್ತಿನಲ್ಲಿ 43 ಶಾಲೆಗಳಿಂದ 1500 ವಿದ್ಯಾರ್ಥಿಗಳು ಪಾಲ್ಗೊಂಡು ಭಗವದ್ಗೀತೆಯ ಮೊದಲ 3 ಅಧ್ಯಾಯಗಳಿಂದ ಆಯ್ದ 18 ಪ್ರಶ್ನೆಗಳಿಗೆ www.culturalindia.org ವೆಬ್ಸೈಟ್ ಮೂಲಕ ಉತ್ತರ ನೀಡಿದ್ದರು. ಆಗಸ್ಟ್ 19ರಂದು ಪ್ರಾರಂಭವಾದ 2ನೇ ಸುತ್ತಿನಲ್ಲಿ ಭಗದ್ಗೀತೆಯ 4ರಿಂದ 18 ಅಧ್ಯಾಯಗಳಲ್ಲಿ ಆಯ್ದ 70 ಪ್ರಶ್ನೆಗಳಿಗೆ 33 ಶಾಲೆಯ ವಿದ್ಯಾರ್ಥಿಗಳು ಉತ್ತರಿಸಿದ್ದರು.
ಈ ಎರಡೂ ಸುತ್ತುಗಳಲ್ಲಿ ಆಯ್ಕೆಯಾದ 25 ಶಾಲೆಗಳ 72 ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 6ರಂದು ಶ್ರೀ ಕುಮಾರನ್ಸ್ ಶಾಲೆ, ತ್ಯಾಗರಾಜನಗರ, ಬೆಂಗಳೂರು ಮತ್ತು ವಿದ್ಯಾಭಾರತಿ ಶಾಲೆ, ರಾಜಾಜಿನಗರ 1ನೇ ಬ್ಲಾಕ್ ನಲ್ಲಿ ನಡೆಸಿದ ಸೆಮಿಫೈನಲ್ಸ್ ಸ್ಪರ್ಧೆಯಲ್ಲಿ ಪೂರ್ಣಪ್ರಜ್ಞ ಯಲಹಂಕ, ಪೂರ್ಣಪ್ರಜ್ಞ ಸದಾಶಿವನಗರ, ಪೂರ್ಣಪ್ರಜ್ಞ ವಿಡಿಯ, ಜ್ಯೋತಿ ಕೇಂದ್ರೀಯ ವಿದ್ಯಾಲಯ, ನ್ಯಾಷನಲ್ ಹೈಸ್ಕೂಲು, ಜಿಂದಲ್ ಪಬ್ಲಿಕ್ ಸ್ಕೂಲು, ಪ್ರಾರ್ಥನಾ ಶಾಲೆ ಮತ್ತು ಭಾರತೀಯ ಸಂಸ್ಕೃತಿ ವಿದ್ಯಾಪೀಠ - ಈ 7 ಶಾಲೆಗಳ 24 ವಿದ್ಯಾರ್ಥಿಗಳು ಜಯಗಳಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸ್ವರ್ಣವಲ್ಲೀ ಮಠ, ಸೋಂದಾ, ಶಿರಸಿಯ ಪೂಜ್ಯ ಶ್ರೀಶ್ರೀ ಗಂಗಾಧರೇಂದ್ರ ಸ್ವಾಮೀಜಿಗಳಿಂದಲೇ ನೇರವಾಗಿ ಪ್ರಶ್ನೋತ್ತರ ಕಾರ್ಯಕ್ರಮ ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಇಬ್ಬರು ಉದಯೋನ್ಮುಖ ಸಂಗೀತಗಾರರಿಂದ ಭಗವದ್ಗೀತೆಯ 18 ಶ್ಲೋಕಗಳು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಡಲಾಗುತ್ತದೆ. ಮತ್ತು ಭಗವದ್ಗೀತೆಯ 200 ಪುಟಗಳ ಸುಂದರ ಪುಸ್ತಕ "ಗೀತಾ ದ್ಯುತಿ"ಯನ್ನು ಅನುಭವಿ ವಿದ್ವಾಂಸರು, ರಮಣಶ್ರೀ ಹೋಟೆಲ್ ಮತ್ತು ರೆಸಾರ್ಟ್ ಸಂಸ್ಥೆಯ ಮಾಲೀಕರಾದ ಎಸ್. ಷಡಕ್ಷರಿಯವರು ಬಿಡುಗಡೆ ಮಾಡಲಿದ್ದಾರೆ.
ಈ ಫೈನಲ್ಸ್ ಸ್ಪರ್ಧೆಯಲ್ಲಿ ವಿಜೇತ ಮೊದಲ ತಂಡಕ್ಕೆ ರೂ. 15000, 2ನೇ, 3ನೇ ತಂಡಕ್ಕೆ ರೂ. ತಲಾ ರು. 10000 ಮತ್ತು ರು. 5000 ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ದಿಲೀಪ್ ಬೆಳ್ಳಾವೆಯವರನ್ನು 98860 20825 ದೂರವಾಣಿ ಮೂಲಕ ಸಂಪರ್ಕಿಸಬಹುದು.
(ದಟ್ಸ್ ಕನ್ನಡ ವಾರ್ತೆ)