ಚೀನಾದಲ್ಲಿ ಸಿಎಂಗೆ ಜ್ಞಾನೋದಯವಾಗಿದೆ
ಚೀನಾಗೆ ಹೋಗಿ ನೋಡಿದ ಮೇಲೆ ನಿಜವಾಗಿಯೂ ನನಗೆ ಜ್ಞಾನೋದಯವಾಗಿದೆ. ಕರ್ತವ್ಯದ ಬಗೆಗೆ ಅರಿವಾಗಿದೆ ಎಂದು ಹೇಳಿದ್ದಾರೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬಗ್ಗೆ ಚರ್ಚಿಸಲೆಂದು ರಾಜ್ಯ ವಿಧಾನ ಮಂಡಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರೆದಿರುವ ವಿಶೇಷ ಅಧಿವೇಶನದ ಮೋದಲ ದಿನ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಹೌದು, ಚೀನಾಕ್ಕೆ ಹೋದ ಮೇಲೆ ನಿಜವಾಗಿಯೂ ಜ್ಞಾನೋದಯವಾಗಿದೆ. ಅಲ್ಲಿ ಕೃಷಿಕರ ಜೀವನೋತ್ಸಾಹ, ಸ್ಥಿತಿಗತಿ ಹಾಗೂ ಕೃಷಿ ಕ್ಷೇತ್ರದ ಸಮೃದ್ಧಿ ಕಂಡು ಬೆರಗಾಗಿದ್ದೇನೆ. ಚೀನಾದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಯಾವುದೇ ಸರಕಾರಿ ಸವಲತ್ತು ಕೊಡುವುದಿಲ್ಲ ಎಂಬಂತಹ ನಿರ್ಧಾರ ಇಲ್ಲಿ ಕೈಗೊಂಡರೆ ಕಷ್ಟವಾಗಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.
ಚೀನಾದಲ್ಲಿ ಹನಿ ನೀರು ವ್ಯರ್ಥವಾಗುವುದಿಲ್ಲ. ಬೇಸಾಯ ತುಂಬ ಅಚ್ಚುಕಟ್ಟಾಗಿದೆ. ಕೃಷಿ ಜೊತೆ ಮೀನು ಸಾಕಣಿ, ಹಂದಿ ಸಾಕಣಿಯಂತಹ ಉಪಕಸುಬುಗಳಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ರಾಜ್ಯದಲ್ಲಿಯೂ ರೈತರಲ್ಲಿ ಹೆಚ್ಚು ಕಾರ್ಯಕ್ಷಮತೆ ತರಲು ವಿಶೇಷ ಪ್ರಯತ್ನ ಮಾಡಬೇಕಾಗಿದೆ. ರೈತರನ್ನು ಆರ್ಥಿಕವಾಗಿ ಬಲಪಡಿಸಬೇಕಾಗಿದೆ. ಕೃಷಿಕರ ಬಾಳಿನಲ್ಲಿ ಅನಿಶ್ಚಿತತೆ ದೂರ ಮಾಡಬೇಕಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)