ಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ
ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಶೇಕ್ ಸಲೀಂ ಎಂಬ ಯುವಕ 12ನೇ ಶತಮಾನದ ದಾರ್ಶನಿಕ ಬಸವಣ್ಣನ ತತ್ತ್ವಕ್ಕೆ ಮಾರುಹೋಗಿ ತನ್ನ ಮನೆಯವರ ಒಪ್ಪಿಗೆ ಪಡೆದುಕೊಂಡು ದೀಕ್ಷೆ ಪಡೆಯುವ ಮೂಲಕ ಲಿಂಗಾಯಿತ ಧರ್ಮ ಸ್ವೀಕರಿಸಿದ್ದಾನೆ. ಶೇಕ್ ಸಲೀಂ ಅವರಿಗೆ ಇದೀಗ ಸಂಗಮಾನಂದ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿದ್ದು, ಬಾಗಲಕೋಟೆಯ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಶೇಕ್ ಸಲೀಂ ಅವರ ದೀಕ್ಷೆ ಕಾರ್ಯ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಯಮೃತ್ಯುಂಜಯ ಸ್ವಾಮೀಜಿಗಳು, ಕಳೆದ 10 ವರ್ಷಗಳ ಹಿಂದೆಯೇ 12ನೇ ಶತಮಾನದಲ್ಲಿ ಎಲ್ಲ ಧರ್ಮವೂ ಒಂದೇ ಎಂದು ಸಮಾನತೆಗಾಗಿ ದೊಡ್ಡ ಸಾಮಾಜಿಕ ಕ್ರಾಂತಿ ನಡೆಸಿದ ಜಗಜ್ಯೋತಿ ಬಸವೇಶ್ವರರ ತತ್ತ್ವ ಹಾಗೂ ಆದರ್ಶಕ್ಕೆ ಮರಳಾಗಿ ಶೇಕ್ ಸಲೀಂ ಲಿಂಗಾಯಿತ ಧರ್ಮವನ್ನು ಸ್ವೀಕರಿಸಿದ್ದಾನೆ. ಅಲ್ಲದೇ ಶೇಕ್ ಸಲೀಂ ತಮ್ಮ ಮನೆಯ ಎಲ್ಲರ ಒಪ್ಪಿಗೆ ಪಡೆದು ಲಿಂಗಾಯಿತ ಧರ್ಮದ ದೀಕ್ಷೆ ಪಡೆದುಕೊಂಡಿದ್ದಾನೆ ಎಂದಿದ್ದಾರೆ.
ಶೇಕ್ ಸಲೀಂ ಅವರಿಗೆ ದೀಕ್ಷೆ ನೀಡಿ ಸಂಗಮಾನಂದ ಸ್ವಾಮೀಜಿ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. ಮುಂದಿನ ಎರಡು ವರ್ಷ ಹಿಮಾಚಲ ಪ್ರದೇಶಕ್ಕೆ ತೆರಳಿ ಅಧ್ಯಯನ ಮಾಡಿ ಮರಳಿ ಬಂದ ನಂತರ ರಾಜ್ಯದ ಪ್ರತಿ ಗ್ರಾಮಕ್ಕೂ ತೆರಳಿ ಬಸವಣ್ಣನವರ ತತ್ತ್ವ ಆದರ್ಶಗಳನ್ನು ಜನತೆಗೆ ತಿಳಿಸುವ ಕೆಲಸದಲ್ಲಿ ತೊಡಗುವುದಾಗಿ ಸಂಗಮಾನಂದ ಸ್ವಾಮೀಜಿಯ ಅಭಿಮತವಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸ್ವಇಚ್ಚೆಯಿಂದ ಲಿಂಗಾಯಿತ ಧರ್ಮವನ್ನು ಸ್ವೀಕರಿಸಿದ್ದು ಮುಸ್ಲಿಂ ಹಾಗೂ ಲಿಂಗಾಯಿತ ಧರ್ಮಗಳಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ಸ್ವಾಮೀಜಿಗಳು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)