ಬೆಂಗಳೂರಿನ ಹೆಬ್ಬಗೋಡಿಯ ಚರ್ಚ್ ಮೇಲೆ ದಾಳಿ
ಹೆಬ್ಬಗೋಡಿಯಲ್ಲಿರುವ ಸೇಂಟ್ ಫ್ರಾನ್ಸಿಸ್ ಡೀ ಸೇಲ್ಸ್ ಚರ್ಚ್ ಮೇಲೆ ಇಂದು ಬೆಳಗಿನ ಜಾವ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಚರ್ಚ್ ಭದ್ರತೆಗಿದ್ದ ವಾಚ್ ಮನ್ ನನ್ನು ದುಷ್ಕರ್ಮಿಗಳು ರೂಮ್ ನಲ್ಲಿ ಕೂಡಿ ಹಾಕಿ ಚರ್ಚ್ ಮೇಲೆ ದಾಳಿ ನಡೆಸಿ, ಸೇಂಟ್ ಮೇರಿ ಮತ್ತು ಜೀಸಸ್ ಪ್ರತಿಮೆಗಳನ್ನು ನಾಶ ಮಾಡಿದ್ದಾರೆ. ಅಲ್ಲದೇ ಚರ್ಚ್ ನ ಕಿಡಿಕಿಗಳು ಒಡೆದುಹಾಕಿದ್ದು, ಚರ್ಚ್ ಆವರಣದಲ್ಲಿ ಪಾರ್ಕ್ ಮಾಡಿದ ವಾಹನಗಳಿಗೆ ಬೆಂಕಿ ಹಚ್ಚುವ ಪ್ರಯತ್ನವನ್ನೂ ಮಾಡಿದ್ದಾರೆ. ವಾಚ್ ಮನ್ ನ ಹೇಳುವಂತೆ ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಸ್ಥಳೀಯರು ಹೊಸೂರು ರಸ್ತೆಯಲ್ಲಿ ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಆನೇಕಲ್ ಶಾಸಕ ನಾರಾಯಣಸ್ವಾಮಿ ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ವಿ ಎಸ್ ಆಚಾರ್ಯ, ಇದೊಂದು ಸಣ್ಣ ಘಟನೆ ಎಂದು ಲಘುವಾಗಿ ಮಾತನಾಡಿದ್ದಾರೆ. ಆದರೆ, ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆಯನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ, ಸರಕಾರ ಇದೊಂದು ಸಣ್ಣ ಘಟನೆ ಎಂದು ಹೇಳುವ ಮೂಲಕ ಚರ್ಚ್ ದಾಳಿಯನ್ನು ಸಮರ್ಥಿಸಿಕೊಂಡಿದೆ. ಇದು ಬಿಜೆಪಿ ಸರಕಾರದ ಇನ್ನೊಂದು ಮುಖ. ಆದ್ದರಿಂದ ಕೂಡಲೇ ಈ ಘಟನೆಯನ್ನು ಸಿಓಡಿ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮಂಗಳೂರು, ದಾವಣಗೆರೆಯಲ್ಲಿ ಚರ್ಚ್ ಮೇಲೆ ದಾಳಿಗಳು ನಡೆದಿದ್ದವು.
(ದಟ್ಸ್ ಕನ್ನಡ ವಾರ್ತೆ)