'ಹಂದಿಜ್ವರ'ಕ್ಕೆ ಬದಲಾಗಿ ಎಚ್1ಎನ್1 ಪದ ಬಳಸಿ
ಜೊತೆಗೆ ಹಂದಿ ಮಾಂಸ ತಿನ್ನುವುದರಿಂದ ಈ ಖಾಯಿಲೆ ಬರುವುದಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದ್ದಾರೆ.ದಿನಪತ್ರಿಕೆ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ "ಮಹಾಮಾರಿ ಹಂದಿಜ್ವರ" ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸುತ್ತಿರುವುದರಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂದರೆ ಮೊದಲಿಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ಇತರೆ ಕೆಲವು ಜಿಲ್ಲೆಗಳಲ್ಲಿರುವ ಹಂದಿ ಸಾಕಾಣಿಕೆದಾರರಿಗೆ ಮತ್ತು ಹಂದಿ ಜೋಗಿ ಜನಾಂಗದವರಿಗೆ ಜೀವನೋಪಾಯಕ್ಕೆ ಮತ್ತು ವ್ಯಾಪಾರ ವಹಿವಾಟಿಗೆ ತುಂಬಾ ತೊಂದರೆಯಾಗಿದೆ.
ಇದರಿಂದಾಗಿ ಭಾರಿ ನಷ್ಟ ಉಂಟಾಗಿರುವುದಾಗಿ ಅಖಿಲ ಕರ್ನಾಟಕ ಹಂದಿ ಜೋಗಿ ಸಂಘ ಹೊಸೂರು ರಸ್ತೆ, ಬೆಂಗಳೂರು ಇವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಸಾರ್ವಜನಿಕರು ಹಾಗೂ ಇತರರು ಸೇರಿ ಹಂದಿ ಸಾಕುವ ಹಾಗೂ ಮಾಂಸ ಮಾರಾಟಗಾರರಿಗೆ ಮಾಂಸ ಮಾರಾಟ ಮಾಡದಂತೆ ತೊಂದರೆ ಕೊಡುತ್ತಿರುವುದಾಗಿ ತಿಳಿಸುತ್ತಾ "ಹಂದಿಜ್ವರ" ಎಂಬ ಪದ ಬಳಕೆಯಿಂದ 3-4 ತಿಂಗಳುಗಳಿಂದ 10 ರಿಂದ 15 ಕೋಟಿ ರೂಪಾಯಿಗಳು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ಮೇರೆಗೆ ಹಂದಿ ಜ್ವರ ಎಂಬ ಪದದ ಬದಲಾಗಿ ಎಚ್1 ಎನ್1 ಎಂದು ಹಾಗೂ ಹಂದಿ ಮಾಂಸ ತಿನ್ನುವುದರಿಂದ ಈ ಖಾಯಿಲೆ ಬರುವುದಿಲ್ಲವೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)