ವೆಬ್ ನಲ್ಲಿ ತೇಜಸ್ವಿ ವಿಸ್ಮಯಲೋಕ ಅನಾವರಣ
ತೇಜಸ್ವಿ ಜೊತೆಗೆ ನಾವು ಇದ್ದದ್ದು ನಮಗೆ ಹೆಮ್ಮೆಯ ವಿಷಯ, ಅವರು ನಮ್ಮನ್ನು ತೊರೆದಿಲ್ಲ ಎಂಬ ನಂಬಿಕೆಯ ಮೇಲೆ ನಾವು ಅವರ ಬದುಕು ಬರಹ ಚಿಂತನೆಗಳ ಸಾಕಾರಕ್ಕಾಗಿ ಟ್ರಸ್ಟ್ ರೂಪಿಸಿದೆವು. ಇಂದು ಪ್ರತ್ಯೇಕ ಕಚೇರಿಯನ್ನು ತೆರೆಯಲಾಯಿತು. ಮೂಡಿಗೆರೆ, ಚಾರ್ಮಾಡಿ ಘಾಟ್ ಸೇರಿದಂತೆ ಜಿಲ್ಲೆಯ ಅನೇಕ ಚಾರಣ ತಾಣಕ್ಕೆ ಹೋಗಲು ಅಗತ್ಯವಾದ ನಕ್ಷೆ(ಟ್ರೆಕ್ಕಿಂಗ್ ರೂಟ್ ಮ್ಯಾಪ್ )ಯನ್ನು ಇಂದು ಅನಾವರಣ ಮಾಡಲಾಗಿದೆ.
ಇದು ತೇಜಸ್ವಿಯವರ ಕನಸಾಗಿತ್ತು. ಚಾರಣ ಪ್ರಿಯರು ನಮ್ಮ ಕಚೇರಿಗೆ ಭೇಟಿ ಕೊಟ್ಟು ಅಗತ್ಯ ಮಾಹಿತಿ, ಪರಿಕರಗಳನ್ನು ಪಡೆದು ಟ್ರೆಕ್ ಮಾಡಬಹುದು. ಇದು ವಿಸ್ಮಯ ಪ್ರತಿಷ್ಠಾನ ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಪ್ರಥಮ ಹೆಜ್ಜೆ ಎನ್ನಬಹುದು. ಈ ಮುಂಚೆ ಕಳೆದ ಏ.5 ರಂದು ತೇಜಸ್ವಿ ಅಭಿಮಾನಿಗಳ ಸಂಗಡ ಸಾಮೂಹಿಕ ಚಾರಣ ಕಾರ್ಯಕ್ರಮ ಮಾಡಿ ಯಶಸ್ಸು ಕಂಡಿದ್ದೆವು.
ನಾಡಿನಾದ್ಯಂತ ಇರುವ ಎಲ್ಲಾ ಸ್ತರದ ಜನತೆಗೆ ತೇಜಸ್ವಿ ಅವರ ಚಿಂತನೆ ತಲುಪುವಂತೆ ಮಾಡಲು ವಿಸ್ಮಯ ಟ್ರಸ್ಟ್ ನವರು ತೇಜಸ್ವಿವಿಸ್ಮಯ ಎಂಬ ವೆಬ್ ತಾಣವನ್ನು ನಿರ್ಮಿಸಿದೆ. ಇದನ್ನು ಕೂಡ ಇಂದು ಲೋಕಾರ್ಪಣೆ ಮಾಡಲಾಯಿತು. ಟ್ರಸ್ಟ್ ಬಗೆಗಿನ ಹೆಚ್ಚಿನ ವಿವರಗಳನ್ನು ವೆಬ್ ತಾಣದಲ್ಲಿ ಪಡೆಯಬಹುದು ಎಂದು ಟ್ರಸ್ಟ್ ನ ಉಪಾಧ್ಯಕ್ಷ ಪ್ರದೀಪ್ ಕೆಂಜಿಗೆ ಹೇಳಿದರು. ಸಮಾರಂಭದಲ್ಲಿ ತೇಜಸ್ವಿ ಜತೆ ನೇಚರ್ ಕ್ಲಬ್ ಆರಂಭಿಸಿದ ಧನಂಜಯ ಜೀವಾಳ, ರಾಘವೇಂದ್ರ ಸೇರಿದಂತೆ ಹಲವು ಜನ ಅಭಿಮಾನಿಗಳು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)