ಜಿನ್ನಾ ಪುಸ್ತಕಕ್ಕೆ ಆರ್ಥಿಕ ನೆರವು ನೀಡಿಲ್ಲ : ವಾಡಿಯಾ
ಟಿವಿವೊಂದಕ್ಕೆ ಸಂದರ್ಶನ ನೀಡಿದ ಅವರು, ಇಂತಹ ಅಧಾರ ರಹಿತ ವರದಿಗಳು ಸೃಷ್ಟಿಯಾಗುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಮೊಹ್ಮದ್ ಅಲಿ ಜಿನ್ನಾ ನನ್ನ ತಾತ ಎನ್ನುವುದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಜಸ್ವಂತ್ ಸಿಂಗ್ ನಂತಹ ವ್ಯಕ್ತಿಗಳಿಂದ ಪ್ರಮಾಣಪತ್ರ ಪಡೆಯುವ ಅವಶ್ಯಕತೆ ನನಗಿಲ್ಲ. ಎಲ್ಲವೂ ಇತಿಹಾಸದಲ್ಲಿ ಅಡಗಿದೆ. ಅನಗತ್ಯವಾಗಿ ಇಂತಹ ಪ್ರಕರಣಗಳನ್ನು ತೆಗೆದುಕೊಂಡು ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ವಿಭಜನೆಗೆ ಸಂಬಂಧಿಸಿದಂತೆ ಜಸ್ವಂತ್ ಸಿಂಗ್ ಅವರು ಬರೆದಿರುವ ಪುಸ್ತಕದಲ್ಲಿ ತತ್ವ ಸಿದ್ಧಾಂತ ಉಲ್ಲಂಘನೆ ಎಂದು ಆರೋಪಿಸಿ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವುದು ಉತ್ತಮ ಬೆಳವಣಿಗೆಯಂತೂ ಅಲ್ಲ. ಬಿಜೆಪಿಯ ಈ ಕ್ರಮದಿಂದ ನನಗೆ ತೀವ್ರ ಆಘಾತ, ದುಃಖ ಮತ್ತು ಅಚ್ಚರಿ ಆಗಿದೆ. ಕಳೆದ 40 ವರ್ಷಗಳಿಂದ ಬಿಜೆಪಿ ಸರ್ವೋಚ್ಚ ನಾಯಕ ಎಲ್ ಕೆ ಅಡ್ವಾಣಿ ನನ್ನ ಅತ್ಮೀಯ ಸ್ನೇಹಿತಲ್ಲಿ ಒಬ್ಬರು ಎಂದು ವಾಡಿಯಾ ವಿವರಿಸಿದ್ದಾರೆ.
ಜಸ್ವಂತ್ ಸಿಂಗ್ ಬರೆದಿರುವ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡನ್ಸ್ ನಲ್ಲಿ ಅಖಂಡ ಭಾರತ ವಿಭಜನೆಯಾಗಲು ಜವಾಹರ್ ಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಕಾರಣ ಎನ್ನುವುದಲ್ಲದೇ ಜಿನ್ನಾ ಅವರಿಗೆ ಪುಸ್ತಕದಲ್ಲಿ ಹಿರೋ ಪಟ್ಟ ನೀಡಲಾಗಿದೆ. ಇದು ಬಿಜೆಪಿಯಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಪರಿಣಾಮ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.
(ಏಜನ್ಸೀಸ್)