ತ್ಯಾವರೆಕೊಪ್ಪ ಸಿಂಹ ದತ್ತುಪಡೆದ ರಾಘವೇಂದ್ರ
ಸೋಮವಾರ ಸಾಗರ ರಸ್ತೆಯಲ್ಲಿರುವ ಪೆಸಿಟ್ ಕಾಲೇಜಿನಲ್ಲಿ ಹಮ್ಮಿ ಕೊಳ್ಳಲಾಗಿದ್ದ 2009-10ನೇ ಸಾಲಿನ ಬಿ.ಇ. ಪ್ರಥಮ ಸೆಮಿಸ್ಟರ್ ತರಗತಿಗಳ ಉದ್ಘಾಟನೆಯ ಸಂದರ್ಭದಲ್ಲಿ ಸಿಂಹಧಾಮದ ಸಿಂಹವನ್ನು ರಾಘವೇಂದ್ರ ದತ್ತು ತೆಗೆದುಕೊಂಡರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೆಸಿಟ್ ಕಾಲೇಜಿನ ಛೇರ್ಮನ್ ಪ್ರೊ: ಎಂ.ಆರ್. ದೊರೈಸ್ವಾಮಿ, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಕನಸನ್ನು ಹೊಂದಿರಬೇಕು. ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸತತ ಪ್ರಯತ್ನಪಟ್ಟು ಜೀವನದಲ್ಲಿ ಮುಂದೆ ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಉಜ್ವಲವಾಗಿಸಲು ಮುಂದಾಗಬೇಕೆಂದರಲ್ಲದೆ, ಒಳ್ಳೆಯ ವ್ಯಕ್ತಿಯಾಗಿ ದೇಶಕ್ಕೆ ಹೆಸರನ್ನು ತರುವಲ್ಲಿ ಶ್ರಮಿಸಬೇಕೆಂದರು. ವಿದ್ಯಾರ್ಥಿಗಳು ಸರ್. ಎಂ. ವಿಶ್ವೇಶ್ವರಯ್ಯನವರನ್ನು ಆದರ್ಶ ವ್ಯಕ್ತಿಯನ್ನಾಗಿ ಪರಿಗಣಿಸಿ, ಅವರಂತೆಯೇ ಸಾಧನೆ ಮಾಡಬೇಕೆಂದು ಸೂಚಿಸಿದರು.
ಜಾಗತಿಕ ಹಿಂಜರಿತದಿಂದ ಇಡೀ ವಿಶ್ವವೇ ತಲ್ಲಣ ಗೊಂಡಿದ್ದರ ಪರಿಣಾಮವಾಗಿ ಹಲವರು ಉದ್ಯೋಗ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದ್ದರೆ, ಭಾರತದಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ ಎಂದರು. ಐಟಿ ಉದ್ಯಮ ಆರ್ಥಿಕ ಹಿಂಜರಿತದಿಂದ ನಷ್ಟ ಹೊಂದುತ್ತಿದ್ದು, ಹೀಗಾಗಿ ಮುಂದಿನ ಐದು ವರ್ಷಗಳವರೆಗೆ ರಾಜ್ಯದಲ್ಲಿ ಯಾವುದೇ ಇಂಜಿನಿಯರಿಂಗ್ ಕಾಲೇಜುನ್ನು ಹೊಸದಾಗಿ ಸ್ಥಾಪಿಸಲು ಅನುಮತಿ ನೀಡಬಾರದೆಂದು ಮುಖ್ಯಮಂತ್ರಿಗಳಲ್ಲಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಹಾಗೆಯೇ ಪೆಸಿಟ್ ಕಾಲೇಜ್ ಕೂಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವಲ್ಲಿ ಮುಂದಿದೆ. ವಿದ್ಯಾರ್ಥಿಗಳು ಪ್ರಯತ್ನಪಟ್ಟು ದೇಶಕ್ಕೆ ಕೀರ್ತಿ ತರುವಂತಹ ಕೆಲಸ ಮಾಡಬೇಕೆಂದರು.
ಉಪಸಂರಕ್ಷಣಾಧಿಕಾರಿ ಸ್ಮಿತಾಬಿಜ್ಜೂರ್ ಮಾತನಾಡಿ, 1988ರಲ್ಲಿ ಸ್ಥಾಪಿಸಲ್ಪಟ್ಟ ತ್ಯಾವರೆಕೊಪ್ಪ ಸಿಂಹಧಾಮ ಇದುವರೆಗೂ ಅಭಿವೃದ್ಧಿಯಾಗಿಲ್ಲ. ಮುಖ್ಯಮಂತ್ರಿಗಳು ಆಸಕ್ತಿ ತೋರಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಇಲ್ಲಿರುವ ಪ್ರಾಣಿಗಳನ್ನು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುಂತಾದವರು ದತ್ತು ತೆಗೆದುಕೊಳ್ಳುವಲ್ಲಿ ಮುಂದಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಕೌನ್ಸಿಲ್ ಸದಸ್ಯರಾದ ಎಸ್.ವೈ. ಉಮಾದೇವಿ, ಅರುಣಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.