ಟಿವಿ 9ಗೆ ಬುದ್ದಿ ಕೊಡು ದೇವರೇ : ಸೋಮಣ್ಣ
ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಗೋವಿಂದರಾಜನಗರ ಕ್ಷೇತ್ರದ ಗೆಲುವು ಕಾಂಗ್ರೆಸ್ ಗೆಲುವಲ್ಲ. ಕಾಂಗ್ರೆಸ್ ಪಕ್ಷದವರು ಬೀಗುವ ಪ್ರಶ್ನೆಯೇ ಇಲ್ಲ. ಪಕ್ಷಾತೀತವಾಗಿ ಸೋಮಣ್ಣನನ್ನು ಸೋಲಿಸಲಾಗಿದೆ ಎಂದರು.
ಕಳೆದ 22 ವರ್ಷಗಳಿಗೆ ಹೆಚ್ಚು ಕಾಲ ಒಂದು ಕುಟುಂಬದೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ. ನನ್ನ ಕೃತಜ್ಞತೆಯನ್ನು ಒಂದು ಕ್ಷಣ ಆ ಕುಟುಂಬದವರು ನೆನಪಿಸಿಕೊಂಡರೇ ಸಾಕು ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೃತಜ್ಞತೆಗೆ ಹೆಸರಾಗಿದ್ದ ಸಿದ್ದರಾಮಯ್ಯನವರು ಕೂಡಾ ಸೋಮಣ್ಣನ ಸಹಕಾರವನ್ನು ಒಂದು ಬಾರಿ ನೆನೆಪಿಸಿಕೊಳ್ಳಬೇಕು ಎಂದು ತೀವ್ರ ಬೇಸರದಿಂದಲೇ ಹೇಳಿದರು.
ಕಳೆದ 25 ವರ್ಷಗಳಿಂದ ಜನರ ಹಿತ ಬಯಸಿದ ನನಗೆ ದಿಢೀರನೆ ಸುನಾಮಿ ಅಪ್ಪಳಿಸಿದ್ದು, ಬರುವ ಬಿಬಿಎಂಪಿ ಚುನಾವಣೆಯಲ್ಲಿ ಇದಕ್ಕೆ ಭದ್ರವಾದ ತಡೆಗೋಡೆ ನಿರ್ಮಿಸುತ್ತೇನೆ ಎಂದ ಸೋಮಣ್ಣ, ಸೋಲಿನ ನೈತಿಕ ಜವಾಬ್ದಾರಿ ಅರಿತು ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದರು. ಯಡಿಯೂರಪ್ಪ ನಾಯಕತ್ವದಲ್ಲಿ ನಂಬಿಕೆ ಇಟ್ಟು ಬಿಜೆಪಿ ಸೇರಿರುವೆ. ನನಗೆ ಯಾವುದೇ ಜಾತಿ ಗೊತ್ತಿಲ್ಲ. ಎಲ್ಲ ಜಾತಿಗಳಿಗೆ ಸೇರಿದವನು. ಪ್ರತಿಪಕ್ಷಗಳು ಮಾಡಿದ ದಗಲ್ ಬಾಜಿ ಕೆಲಸದಿಂದ ನಾನು ಸೋಲಬೇಕಾಯಿತು. ಪ್ರತಿಪಕ್ಷಗಲೆಲ್ಲಾ ಒಂದಾದವು. ಜಾತಿಯ ತಡೆಗೋಡೆ ಕೆಲಸ ಮಾಡಿತು ಎಂದು ಸೋಲನ್ನು ವಿವರಿಸಿದರು.
ವಿಜಯನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಬಿನ್ನಿ ಮಿಲ್ ಬಳಿ ಟ್ರಸ್ಟ್ ಹೆಸರಿನಲ್ಲಿದ್ದ ಒಂದು ಎಕರೆ ಜಾಗವನ್ನು ಸೋಮಣ್ಣ ಅವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಅದನ್ನು ಟಿವಿ 9 ಮತದಾನದ ಮುನ್ನಾ ದಿನ ದಿನಪೂರ್ತಿ ಪ್ರಸಾರ ಮಾಡಿತ್ತು. ನನ್ನ ಸೋಲಿಗೆ ಪ್ರತಿಪಕ್ಷಗಳು ಹೆಣೆದ ಸುಳ್ಳು ಹಗರಣ ಕಾರಣವಾಯಿತು. ತಲೆ ಬುಡ ಗೊತ್ತಿಲ್ಲ ಟಿವಿ 9 ಪ್ರಸಾರ ಮಾಡಿದ್ದು, ಜನರ ಮೇಲೆ ಭಾರಿ ಪರಿಣಾಮ ಬೀರಿತು ಎಂಬುದು ಸೋಮಣ್ಣ ಅವರ ಆರೋಪವಾಗಿದೆ.
(ದಟ್ಸ್ ಕನ್ನಡ ವಾರ್ತೆ)