ಕೃಷ್ಣದೇವರಾಯನ ಆಳ್ವಿಕೆ 500 ರ ಸಂಭ್ರಮ
ಬೆಂಗಳೂರು, ಆ. 31 : ವಿಜಯನಗರದ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನ ಆಳ್ವಿಕೆಗೆ 500 ವರ್ಷಗಳ ಪೂರ್ಣಗೊಂಡಿರುವ ಗಳಿಗೆಯಲ್ಲಿ ರಾಜ್ಯ ಸರಕಾರ ಮೂರು ದಿನಗಳ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ ಎಂದು ಪ್ರವಾಸೋಧ್ಯಮ ಸಚಿವ ಜವಾರ್ದನರೆಡ್ಡಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮುಂದಿನ ವರ್ಷ ಜನವರಿ 29 ರಿಂದ ಮೂರು ಕಾಲ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಈ ಶುಭ ಸಂದರ್ಭದ ಸವಿನೆನಪಿಗಾಗಿ ಕೃಷ್ಣದೇವರಾಯನ 25 ಅಡಿ ಉದ್ದದ ಕಂಚಿನ ಪ್ರತಿಮೆಯನ್ನು ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು. ಜೊತೆಗೆ ಐತಿಹಾಸಿಕ ಹಂಪಿಯ ಅಭಿವೃದ್ಧಿಗೆ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಇಲ್ಲಿರುವ ಉದ್ಯಾನವನಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಮತ್ತು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ರೆಡ್ಡಿ ವಿವರಿಸಿದರು.
ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಕಾರ್ಯಕ್ರಮದಲ್ಲಿ ಆಹ್ವಾನಿಸುವ ಕಾರ್ಯಕ್ರಮವಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ ಶೀಘ್ರದಲ್ಲಿ ದೆಹಲಿಗೆ ಭೇಟಿ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ರೆಡ್ಡಿ ಹೇಳಿದರು. ಇದೇ ನವೆಂಬರ್ 1 ರಂದು ಮೂರು ದಿನಗಳ ವಿಜಯನಗರ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜನಾರ್ದನರೆಡ್ಡಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)