ಬಂಟ್ವಾಳ : ಕ್ಷುಲ್ಲಕ ಕಾರಣದಿಂದ ಕೋಮುಗಲಭೆ
ಬಂಟ್ವಾಳ, ಆ.31 : ಕ್ಷುಲ್ಲಕ ಕಾರಣಕ್ಕೆ ತಾಲ್ಲೂಕಿನ ಕೇಂದ್ರ ಬಿಸಿ ರೋಡ್ ನಲ್ಲಿ ಭಾನುವಾರ ಸಂಜೆ ಕೋಮುಗಲಭೆ ಭುಗಿಲೆದ್ದಿದ್ದು, ಮಹಿಳೆ ಸೇರಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಶಾಂತಿ ಕಾಪಾಡುವ ಉದ್ದೇಶದಿಂದ ಬಂಟ್ವಾಳ ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯರಾತ್ರಿವರೆಗೂ ಅಪರಾಧಿ ಪ್ರಕ್ರಿಯಾ ಸಂಹಿತೆ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಿಸಿ ರೋಡ್ ಸಮೀಪದ ಮೋಡಂಕಾಪು ಎಂಬಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ದಸರಾ ಕ್ರೀಡಾಕೂಟ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಕೋಮುಗಲಭೆ ಹುಟ್ಟಿಕೊಂಡಿದೆ. ಯುವಕ ಯುವತಿಯರ ವಿವಿಧ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಈ ವೇಳೆ ವಾಲಿಬಾಲ್ ಆಟದಲ್ಲಿ ನಿರತರಾಗಿದ್ದ ಯುವತಿಯೊಬ್ಬಳಿಗೆ ಅನ್ಯ ಕೋಮಿನ ಯುವಕರ ಗುಂಪೊಂದು ಚುಡಾಯಿಸಿದ್ದು, ಘಟನೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಯುವತಿ ಸೇರಿ 10 ಮಂದಿ ಗಾಯಗೊಂಡಿದ್ದಾರೆ.
ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಬಿಸಿ ರೋಡ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಜನರನ್ನು ಚೆದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೋಮವಾರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಘಟನೆ ನಂತರ ಸೂಕ್ಷ್ಮ ಪ್ರದೇಶಗಳಾದ ಕಲ್ಲಡ್ಕ, ಮಾರಿಪಳ್ಯ ಮತ್ತಿತರ ಪ್ರದೇಳಗಳಲ್ಲಿ ಘರ್ಷಣೆಗಳು ನಡೆದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)