ಆಪರೇಷನ್ ಕಮಲ : ಬಿಜೆಪಿ ಕಿವಿಹಿಂಡಿದ ಆರ್ಎಸ್ಎಸ್
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಆದ 'ಆಪರೇಷನ್ ಕಮಲ'ದ ಸೋಲು, ಗಣಿಧಣಿಗಳ ಕೇಸು ವಾಪಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಉದ್ಭವಾಗಿರುವ ಸಮಸ್ಯೆಯ ಸುಳಿ, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ ಸುಧಾಕರ್, ಭಿನ್ನಮತದ ಭುಗಿಲೆಬ್ಬಿಸಿರುವ ರೇಣುಕಾಚಾರ್ಯ ಮುಂತಾದ ಸಂಕೋಲೆಗಳಲ್ಲಿ ರಾಜ್ಯ ಬಿಜೆಪಿ ಸಿಲುಕಿದ್ದು ಆರ್ಎಸ್ಎಸ್ ಅನ್ನು ಕೂಡ ಧೃತಿಗೆಡಿಸಿದೆ. ಬೈಠಕ್ ನಲ್ಲಿ ಬೆಣ್ಣೆ ಹಚ್ಚುವ ಬದಲು ಆರ್ಎಸ್ಎಸ್ ನೇರವಾಗಿ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದೆ.
ಎರಡು ದಿನಗಳ ಬೈಠಕ್ ನಲ್ಲಿ ನಡೆದ ಚರ್ಚೆಗಳ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೈಠಕ್ ನಂತರ ಪತ್ರಕರ್ತರಿಗೆ ವಿವರಿಸಿದರು. ರಾಜ್ಯ ರಾಜಕೀಯದ ಬಗ್ಗೆ ಬೈಠಕ್ ನಲ್ಲಿ ಯಾವುದೇ ಚರ್ಚೆಯಾಗಲಿಲ್ಲ. ಪಕ್ಷ ಮತ್ತು ಸಂಘಟನೆಯ ಬಲವರ್ಧನೆ ಚರ್ಚೆಯ ಮೂಲವಿಷಯವಾಗಿತ್ತು ಎಂದು ಅವರು ತಿಳಿಸಿದರು.
ಸೋಮವಾರ, ಆಗಸ್ಟ್ 31ರಂದು ಬೆಂಗಳೂರಿನಲ್ಲಿ ಬಿಜೆಪಿ ವರಿಷ್ಠರ ಸಭೆ ನಡೆಯುತ್ತಿದ್ದು, ಅಂದು ರಾಜ್ಯ ರಾಜಕೀಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲಾಗುವುದು. ಗೋವಿಂದರಾಜನಗರದಲ್ಲಿ ಉಪಚುನಾವಣೆಯಲ್ಲಿ ಸೋತಿರುವ ಸೋಮಣ್ಣ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಸುಧಾಕರ್ ಅವರ ಭವಿಷ್ಯವನ್ನು ನಾಳೆ ವರಿಷ್ಠರೊಡನೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಆಪರೇಷನ್ ಕಮಲ ಮತ್ತು ಹೊರಗಿಂತ ಬಂದವರಿಗೆ ಮನ್ನಣೆ ನೀಡುವ ಕುರಿತು ಕೂಡ ಆರ್ಎಸ್ಎಸ್ ನಾಯಕು ಕೆಲ ಸೂಚನೆಗಳನ್ನು ನೀಡಿದ್ದಾರೆ. ಕಾಲಾಂತರದಲ್ಲಿ ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಮಖ್ಯಮಂತ್ರಿ ಹೇಳಿದರು.
ಗಣಿಧಣಿಗಳ ವಿರುದ್ಧ ಹೂಡಿದ್ದ ಕ್ರಿಮಿನಲ್ ಪ್ರಕರಣ ಹಿಂತೆಗೆದ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಿದ್ದು, ತಜ್ಞರೊಡನೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದೂ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)