ಬಿಜೆಪಿ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ
ಈ ವಿಷಯವನ್ನು ಬಿಜೆಪಿಯ ಹಿರಿಯ ನಾಯಕರಾದ ವೆಂಕಯ್ಯ ನಾಯ್ಡು ಅವರು ಹೈದರಾಬಾದಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ. ನಾಯಕತ್ವದ ಬದಲಾವಣೆಯ ಸುದ್ದಿ ಕೇವಲ ಗಾಳಿಸುದ್ದಿ ಮಾತ್ರ, ಪ್ರತಿಪಕ್ಷದ ನಾಯಕರಾಗಿ ಲಾಲ್ ಕೃಷ್ಣ ಅಡ್ವಾಣಿಯವರೇ ಮುಂದುವರಿಯಲಿದ್ದಾರೆ. ಬಿಜೆಪಿಯನ್ನು ಮುನ್ನಡೆಸಲು ಅಡ್ವಾಣಿ ಸಮರ್ಥರಾಗಿದ್ದಾರೆ ಎಂದು ವೆಂಕಯ್ಯ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಕೂಡ ಪದಚ್ಯುತಿಗೊಳಿಸಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಪ್ರಮುಖ ಸ್ಟ್ರಾಟೆಜಿಸ್ಟ್ ಅರುಣ್ ಜೇಟ್ಲಿ ಮತ್ತು ಪ್ರತಿಪಕ್ಷ ನಾಯಕತ್ವದ ಸ್ಥಾನಕ್ಕೆ ಸುಷ್ಮಾ ಸ್ವರಾಜ್ ಅರವನ್ನು ತರಲು ಚಿಂತಿಸಲಾಗುತ್ತಿದೆ ಎಂಬ ವರದಿಗಳೂ ಪ್ರಕಟವಾಗಿದ್ದವು.
ಇದಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್ ಅವರು ಇಂದು ದೆಹಲಿಯಲ್ಲಿ ಅಡ್ವಾಣಿಯವರನ್ನು ಭೇಟಿ ಮಾಡಿದ್ದು, ಅವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಉದ್ಭವವಾಗಿರುವ ಬಂಡಾಯ ಶಮನ ಕುರಿತಂತೆ ಚರ್ಚಿಸಿದರೆಂದು ತಿಳಿದುಬಂದಿದೆ.
ಅಡ್ವಾಣಿ ನಾಯಕತ್ವದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ. ಕಷ್ಟದ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದು ಆರ್ಎಸ್ಎಸ್ ಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಭಾಗವತ್ ಅವರು ಇನ್ನೊಬ್ಬ ನಾಯಕ ಮುರಳಿ ಮನೋಹರ ಜೋಶಿ ಅವರನ್ನು ಇಂದು ಭೇಟಿ ಮಾಡಿ ಚರ್ಚಿಸಿದರು.
(ದಟ್ಸ್ ಕನ್ನಡ ವಾರ್ತೆ)