ಜ್ಞಾನದೀಪ ಶಾಲೆಯಲ್ಲಿ ಲಕ್ಷಾಂತರ ರೂ. ದರೋಡೆ
ಶಿವಮೊಗ್ಗ, ಆ. 30 : ಹೊಳೆಹೊನ್ನೂರು ರಸ್ತೆಯಲ್ಲಿರುವ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಇಬ್ಬರು ಗೂರ್ಖಾಗಳ ಮೇಲೆ ದರೋಡೆಕೋರರು ಮಾರಣಾಂತಿಕ ದಾಳಿ ನಡೆಸಿ, 1 ಲಕ್ಷಕ್ಕೂ ಹೆಚ್ಚಿನ ಹಣವನ್ನು ದೋಚಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಸುಮಾರು 15ರಿಂದ 20 ಜನರಿದ್ದ ದರೋಡೆಕೋರರ ತಂಡವೊಂದು ಬೆಳಗಿನ ಜಾವ ಜ್ಞಾನದೀಪ ಶಾಲೆಗೆ ದಾಳಿ ಮಾಡಿ, ಸನಾತನ್ ಕ್ರೋ(26) ಹಾಗೂ ದೋರಾ ಸಿಂಗ್(24)ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರು ಗೂರ್ಖಾಗಳಿಗೆ ಕೈ ಮತ್ತು ಕಾಲುಗಳಿಗೆ ತೀವ್ರ ಪೆಟ್ಟಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ರಕ್ಷಣಾಧಿಕಾರಿ ಮುರುಗನ್ ತಿಳಿಸಿದ್ದಾರೆ.
ದರೋಡೆಕೋರರ ತಂಡ ಇಬ್ಬರು ಗೂರ್ಖಾಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿ, ಕೈ, ಕಾಲುಗಳನ್ನು ಹಿಂಬದಿಯಿಂದ ಕಟ್ಟಿ ಹಾಕಿತ್ತು. ಸನಾತನ್ ಕ್ರೋನ ಕಾಲೊಂದು ತುಂಡಾಗಿದ್ದು, ಮತ್ತೋರ್ವ ಗೂರ್ಖಾ ದೋರಾ ಸಿಂಗ್ನ ಕೈ ತುಂಡಾಗಿದೆ ಎಂದು ಮುರುಗನ್ ವಿವರಿಸಿದರು.
ಗೂರ್ಖಾಗಳ ಮೇಲೆ ಹಲ್ಲೆ ಮಾಡಿ, ತೀವ್ರವಾಗಿ ಥಳಿಸಿದ ನಂತರ ಇಬ್ಬರನ್ನೂ ಶಾಲೆಯ ಮುಂಭಾಗದಲ್ಲಿರುವ ಮರವೊಂದಕ್ಕೆ ಕಟ್ಟಿ ಹಾಕಿದರು. ಗೂರ್ಖಾಗಳ ಬಳಿಯಿದ್ದ ಬೀಗವನ್ನು ಬಲವಂತದಿಂದ ಕಸಿದುಕೊಂಡು, ಶಾಲೆಯ ಬಾಗಿಲನ್ನು ತೆರೆದು, ಒಳಗಿದ್ದ ಮೂರೂ ಅಲಮೇರಗಳ ಬಾಗಿಲನ್ನು ಒಡೆದು, ಸುಮಾರು 1 ಲಕ್ಷಕ್ಕೂ ಹೆಚ್ಚಿನ ಹಣವನ್ನು ದೋಚಿದ್ದಾರೆ ಹಾಗೂ ಫೈಲುಗಳನ್ನೆಲ್ಲಾ ಚಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಶಾಲಾ ಮುಖ್ಯಸ್ಥರು ಪೊಲೀಸರಿಗೆ ವಿವರಿಸಿದ್ದಾರೆ.
ಘಟನೆಯ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕುಣಿಗಲ್ ಶ್ರೀಕಂಠ, ಭದ್ರಾವತಿ ಡಿವೈಎಸ್ಪಿ ಮೆಂಡೋನ್ಸಾ, ಭದ್ರಾವತಿ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ್, ಹೊಳೆಹೊನ್ನೂರು ಸಬ್ಇನ್ಸ್ಪೆಕ್ಟರ್ ಜಾದವ್ ಮತ್ತು ಪೊಲೀಸರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.