ಬಿಜೆಪಿಗೆ ಮದ್ದು ನೀಡಲು ಸಿದ್ಧ : ಭಾಗವತ್
ಬಿಜೆಪಿ ಪಕ್ಷದೊಳಗೆ ಎದ್ದಿರುವ ಆಂತರಿಕ ಸ್ಫೋಟದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಗರದಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿ 'ಕೇಶವಕೃಪಾ'ದಲ್ಲಿ ಮಾಧ್ಯಮಗೊಷ್ಠಿ ನಡೆಸಿ ಅವರು ಮಾತನಾಡುತ್ತಿದ್ದರು. ಆರ್ಎಸ್ಎಸ್ ಕಳೆದ 83 ವರ್ಷಗಳಿಂದ ರಾಷ್ಟ್ರದ ಐಕ್ಯತೆ, ಸಮಾನತೆ ಹಾಗೂ ಅಭಿವೃದ್ಧಿ ಶ್ರಮಿಸಿದೆ. ಬಿಜೆಪಿಯಲ್ಲಿ ನಡೆಯತ್ತಿರುವ ದೈನಂದಿನ ಚಟುವಟಿಕೆಗಳಲ್ಲಿ ಆರ್ಎಸ್ಎಸ್ ಎಂದೂ ತಲೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆಲ ನಾಯಕರು ವ್ಯಕ್ತಿಪಡಿಸಿರುವ ಅಭಿಪ್ರಾಯಗಳು ಬಿಜೆಪಿ ಅಥವಾ ಸಂಘಟನೆಗೆ ಸಂಬಂಧಿಸಿಲ್ಲ ಎಂದು ಜಸ್ವಂತ್ ಸಿಂಗ್ ಪುಸ್ತಕಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಉತ್ತರಿಸಿದರು.
ಭಾರತ ಒಂದು ಪ್ರಬಲ ರಾಷ್ಟ್ರವಾಗಿಸಲು ಶ್ರಮಿಸಲು ಸಂಘ ಎಂದಿಗೂ ಕಂಕಣಬದ್ಧವಾಗಿದೆ. ದೇಶದ ಕಟ್ಟುವ ಬುನಾದಿ ಮೇಲೆ ಜನಸಂಘ, ಆರ್ಎಸ್ಎಸ್ ಮತ್ತಿತತರ ಹಿಂದೂ ಸಂಘಟನಗಳ ಜನ್ಮತಾಳಿವೆ. ದೇಶದ ಕಟ್ಟುವ ಕರ್ತವ್ಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಭಾಗವತ್ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಕಲಹ ತಾತ್ಕಾಲಿಕ. ಅದು ಶೀಘ್ರದಲ್ಲಿ ಕೊನೆಗೊಳ್ಳಲಿದೆ ಎಂಬ ಆಶಾವಾದಿ ಹೊಂದಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಘದ ಸಹಾಯ, ಸಹಕಾರ ಬಯಸಿದರೆ ಸಲಹೆ ಸೂಚನೆ ನೀಡಲು ಅಭ್ಯಂತರವೇನು ಇಲ್ಲ ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಉದ್ಭವಿಸಿರುವ ಕಲಹಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಜೊತೆ ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಲಾಗಿದ್ದು, ಪಕ್ಷದೊಳಗಿರುವ ಗುಂಪುಗಾರಿಕೆಯನ್ನು ಕೈಬಿಟ್ಟು ಪಕ್ಷ ಕಟ್ಟುವ ನಿಟ್ಟಿನಲ್ಲಿ ಯೋಚನೆ ಮಾಡಿ ಎಂದು ಕಿವಿ ಮಾತು ಹೇಳಲಾಗಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತ ನಂತರ ನೂತನ ನಾಯಕರ ಅವಶ್ಯಕತೆ ಇದೆ. ಬಿಜೆಪಿಗೆ ಒಬ್ಬ ಯುವಮುಖಂಡರೊಬ್ಬರನ್ನು ನಾಯಕರನ್ನಾಗಿಸುವುದು ತುರ್ತಾಗಿ ಆಗಬೇಕಿರುವ ಕೆಲಸ ಎಂದು ಅಭಿಪ್ರಾಯಪಟ್ಟರು. ಇದರಿಂದ ದೇಶಕ್ಕೂ ಲಾಭ ಮತ್ತು ಪಕ್ಷಕ್ಕೂ ಲಾಭ ಎಂದು ತೀಕ್ಣವಾಗಿ ಅಡ್ವಾಣಿ ಅವರನ್ನು ಟೀಕಿಸಿದರು.
ಬಿಜೆಪಿ ದೈನಂದಿನ ಚಟುವಟಿಕೆಗಳಲ್ಲಿ ಆರ್ಎಸ್ಎಸ್ ಕೈಯಾಡಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಭಾಗವತ್, ಶೌರಿ ಪಕ್ಷದಲ್ಲಿ ಹಿರಿಯ ನಾಯಕ. ಸಂಘದ ಬಗ್ಗೆ ಹಗುರವಾಗಿ ಮಾತನಾಡಿರುವುದು ವಿಷಾದಕರ ಸಂಗತಿ. ಸಂಘ ಎಂದಿಗೂ ಬಿಜೆಪಿಯ ಆಂತರಿಕ ವಿಷಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೂ ಶೌರಿ ವಿನಾಕಾರಣ ಸಂಘದ ಬಗ್ಗೆ ಮಾತನಾಡಿರುವುದು ಎಷ್ಟು ಸರಿ ಎನ್ನುವುದನ್ನು ಅವರು ಮತ್ತೊಮ್ಮೆ ಯೋಚಿಸಬೇಕು ಎಂದು ಭಾಗವತ್ ಕಿಡಿಕಾರಿದರು.
ಕಂದಹಾರ್ ವಿಮಾನ ಅಪಹರಣಕ್ಕೆ ಸಂಬಂಧಿಸಿದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಕಾರಣ ಅದು ಅಂದಿನ ಸರಕಾರಕ್ಕೆ ಸಂಬಂಧಿಸಿದ ಸಂಗತಿ. ಅಂದಿನ ಸರಕಾರ ನಡೆಸಿದವರು ಅದರ ಬಗ್ಗೆ ನಿಖರವಾಗಿ ಉತ್ತರಿಸಬಲ್ಲರು ಎಂದು ಭಾಗವತ್ ಮತ್ತೊಂದು ವಿವಾದ ಸೃಷ್ಟಿಸುವ ಗಳಿಗೆಯಿಂದ ನುಣುಚಿಕೊಂಡರು. ಭಾರತದ ವಿಭಜನೆಯಲ್ಲಿ ಜಿನ್ನಾ ಪಾತ್ರಕ್ಕೆ ಸಂಬಂಧಿಸಿದಂತೆ ಜಸ್ವಂತ್ ಸಿಂಗ್ ಬರೆದಿರುವ ಪುಸ್ತಕವನ್ನು ನಾನು ಈವರೆಗೂ ಓದಿಲ್ಲ. ಮುಂದಿನ ದಿನಗಳಲ್ಲಿ ಓದಬೇಕು ಎಂಬ ಆಶೆಯೂ ಅಲ್ಲ. ಆದರೆ, ದೇಶದ ಘನತೆ ಧಕ್ಕೆ ಬರುವಂತೆ ವರ್ತಿಸುವುದು ಮಾರಕ ಹಾಗೂ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ಏಜನ್ಸೀಸ್)