ಕಂದಹಾರ್ ಪ್ರಕರಣ ಅಡ್ವಾಣಿಗೆ ಮೊದಲೇ ಗೊತ್ತಿತ್ತು
ಕಂದಹಾರ್ ವಿಮಾನ ಅಪಹರಣವಾದ ಸಂದರ್ಭದಲ್ಲಿ 168 ಪ್ರಯಾಣಿಕರ ಹಿತ ಕಾಪಾಡುವುದು ಸರಕಾರದ ಕರ್ತವ್ಯವಾಗಿತ್ತು. ಇದಕ್ಕೆ ದೇಶಾದ್ಯಂತ ಭಾರಿ ಒತ್ತಡವೂ ಕೇಳಿಬಂದಿತ್ತು. ಈ ಸಮಯದಲ್ಲಿ ಪ್ರಧಾನಮಂತ್ರಿ, ರಕ್ಷಣಾ ಮಂತ್ರಿ, ವಿದೇಶಾಂಗ ಮತ್ತು ಗೃಹ ಸಚಿವರನ್ನೊಳಗೊಂಡ ಉನ್ನತ ಮಟ್ಟದ ಭದ್ರತಾ ಸಮಿತಿಯಲ್ಲಿ ಚರ್ಚೆಯಲ್ಲಿ ಅಡ್ವಾಣಿ ಕೂಡಾ ಭಾಗವಹಿಸಿದ್ದರು ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಜಿನ್ನಾ ಸಂಬಂಧಿಸಿದ ಪುಸ್ತಕ ಬರೆದು ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಕಂದಹಾರ್ ಪ್ರಕರಣ ಪ್ರಸ್ತಾಪಿಸಿ, ಮೂವರು ಭಯೋತ್ಪಾದಕರು ಬಿಡುಗಡೆಯ ವಿಷಯ ಅಡ್ವಾಣಿ ಅವರಿಗೆ ಗೊತ್ತಿತ್ತು ಎಂದು ಹೇಳಿದ್ದರು. ಜಸ್ವಂತ್ ಸಿಂಗ್ ಅವರ ಹೇಳಿಕೆಯನ್ನು ಬ್ರಿಜೇಶ್ ಮಿಶ್ರಾ ಬೆಂಬಲಿಸಿದ್ದಾರೆ. ಆದರೆ, ಜಸ್ವಂತ್ ಸಿಂಗ್ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದ ಅಡ್ವಾಣಿ, ಅಂದಿನ ಉನ್ನತ ಮಟ್ಟದ ಭದ್ರತಾ ಸಮಿತಿ ಚರ್ಚೆಯಲ್ಲಿ ನಾನು ಪಾಲ್ಗೊಂಡಿರಲಿಲ್ಲ ಎಂದು ತಮ್ಮ ಜೀವನ ಚರಿತ್ರೆ ಮೈ ಕಂಟ್ರಿ ಮೈ ಲಫ್ ಪುಸ್ತಕದಲ್ಲಿ ಬರೆದುಕೊಂಡಿದ್ದರು.
ಕಂದಹಾರ್ ನಲ್ಲಿ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಒತ್ತೆಯಾಳು ಆಗಿರುವ ಪ್ರಯಾಣಿಕರನ್ನು ಬಿಡಿಸಿಕೊಂಡು ಬರಲು ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ನೇತೃತ್ವದಲ್ಲಿ ಮೂವರು ಉಗ್ರರನ್ನು ವಿಮಾನದ ಮೂಲಕ ಕಳುಹಿಸಿಕೊಡುವ ತೀರ್ಮಾನ ಭದ್ರತಾ ಸಮಿತಿ ಒಕ್ಕೂರಲ ತೀರ್ಮಾನಕ್ಕೆ ಬಂದಿತು ಎಂದು ಮಿಶ್ರಾ ವಿವರಿಸಿದ್ದಾರೆ. ಆದರೆ, ಉಗ್ರರು ಬೇಡಿಕೆಯಿಟ್ಟಿದ್ದ 36 ಉಗ್ರರ ಬಿಡುಗಡೆ ಹಾಗೂ 200 ಮಿಲಿಯನ್ ಒತ್ತೆ ಹಣ ಕೊಡಲು ಅಂದಿನ ಭದ್ರತಾ ಸಮಿತಿ ಸ್ಪಷ್ಟವಾಗಿ ನಿರಾಕರಿಸಿತು ಎಂದು ಅವರು ಹೇಳಿದ್ದಾರೆ.
(ಏಜನ್ಸೀಸ್)