ಎಸ್ಕೆಎಸ್ ಸ್ವಸಹಾಯ ಸಂಘದ ಏಜೆಂಟನ ಕಗ್ಗೊಲೆ
ಶಿವಮೊಗ್ಗ, ಆ. 27 : ಹೈದರಾಬಾದ್ ಮೂಲದ ಸ್ವಸಹಾಯ ಗುಂಪಿನ ಏಜೆಂಟರಿಬ್ಬರ ಮೇಲೆ ಏಕಾಏಕೀ ದಾಳಿ ಮಾಡಿದ ಇಬ್ಬರು ಆಗಂತುಕರು ದೊಣ್ಣೆಗಳಿಂದ ತಲೆಯ ಮೇಲೆ ಹೊಡೆದು ಓರ್ವನನ್ನು ಕೊಂದಿದ್ದಲ್ಲದೆ, ಮತ್ತೋರ್ವನಿಗೆ ಎಚ್ಚರ ತಪ್ಪಿಸಿ, ಅವರ ಬಳಿಯಿದ್ದ 1.6 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಎಸ್.ಕೆ.ಎಸ್ ಸ್ವಸಹಾಯ ಸಂಘದ ಏಜೆಂಟರಾದ ರಾಯಚೂರು ಜಿಲ್ಲೆ ಮಾನವಿ ಸಮೀಪದ ವಾಸಿ ಶರಣಬಸಪ್ಪ (22) ಕೊಲೆಯಾದ ಯುವಕನಾಗಿದ್ದು, ಈತನ ಜೊತೆಗಿದ್ದ ಮತ್ತೋರ್ವ ಏಜೆಂಟ್ ಬೀದರ್ ಮೂಲದ ಮಾಳಪ್ಪ (22) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗುರುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ಎಸ್.ಕೆ.ಎಸ್.ಸ್ವಸಹಾಯ ಸಂಘದ ಗುಂಪುಗಳಿಂದ ಹಣವನ್ನು ಸಂಗ್ರಹಿಸಿ ಲಕ್ಕಿನಕೊಪ್ಪ ಸರ್ಕಲ್ನಿಂದ ಕಡೇಕಲ್ ಗ್ರಾಮದ ಕಡೆ ಹೊರಟಿದ್ದ ಸಂದರ್ಭದಲ್ಲಿ ಮರದ ಬುಡದಲ್ಲಿ ಬಚ್ಚಿಟ್ಟುಕುಳಿತಿದ್ದ ಇಬ್ಬರು ಆಗಂತುಕರು ಏಕಾಏಕೀ ಸಂಘದ ಏಜೆಂಟರಾದ ಶರಣಬಸಪ್ಪ ಮತ್ತು ಮಾಳಪ್ಪರವರಿಬ್ಬರ ಮೇಲೆ ಮುಗಿಬಿದ್ದರು. ದೊಣ್ಣೆಗಳಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದರು. ಬಲವಾದ ದೊಣ್ಣೆ ಹೊಡೆತದಿಂದ ಶರಣಬಸಪ್ಪನ ತಲೆ ಹೋಳಾಗಿ ಮೆದುಳು ಹೊರಬಿದ್ದು, ಸ್ಥಳದಲ್ಲಿಯೇ ಸಾವಿಗೀಡಾದನು. ಮಾಳಪ್ಪ ಪ್ರಜ್ಞೆ ತಪ್ಪಿದ. 1.6 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಆಗಂತುಕರು ಲಪಟಾಯಿಸಿ ಪರಾರಿಯಾದರು.
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್, ಡಿವೈಎಸ್ಪಿ ಶೇಖರಪ್ಪ, ತುಂಗಾನಗರ ಸಬ್ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು.