ಕಟ್ಟಾ ಮೇಲೆ ಹಲ್ಲೆ : 6 ಜೆಡಿಎಸ್ ಕಾರ್ಯಕರ್ತರ ಬಂಧನ
ಚನ್ನಪಟ್ಟಣ, ಆ. 27 : ಮರು ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮೇಲೆ ಹಲ್ಲೆ ಆರೋಪ ಹೊತ್ತು ತಲೆ ಮರೆಸಿಕೊಂಡಿದ್ದ 6 ಮಂದಿ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಸಿದ್ದಪ್ಪ ನೇತೃತ್ವದ ತಂಡ ಮಡಿಕೇರಿಯ ಕಾಫಿ ತೋಟವೊಂದರಲ್ಲಿ ವಾಸ್ತವ್ಯ ಹೂಡಿದ್ದ ಜೆಡಿಎಸ್ ಮುಖಂಡ ಹಾಗೂ ವಕೀಲ ಬೋಜೇಗೌಡ, ಹೊಡಿಕೆಹೊಸಹಳ್ಳಿ ನಾಗಣ್ಣ, ಮಂಗಳವಾರಪೇಟೆ ಸತ್ಯನಾರಾಯಣ, ರಮೇಶ್, ಕೂರಣಗೆರೆ ರವಿ, ಚಕ್ಕಲೂರು ಕೃಷ್ಣಪ್ಪರನ್ನು ಬಂಧಿಸಿದೆ. ಇವರ ಜತೆಗಿದ್ದ ಇನ್ನಷ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ವಿವರ: ಕಳೆದ ಮರು ಚುನಾವಣೆ ಸಂದರ್ಭದಲ್ಲಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು, ವೆಂಕಟರಮಣಪ್ಪ ಮತ್ತು ಶಾಸಕ ಮುನಿರಾಜುರವರು ತಮ್ಮ ಪ್ರಚಾರ ಮುಗಿಸಿ, ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ನಿವಾಸದಿಂದ ಹೊರಟಿದ್ದಾಗ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಚರ್ಚ್ ರಸ್ತೆಯಲ್ಲಿ ಹಲ್ಲೆ ಮಾಡಿದರು ಎಂದು ರಾಮನಗರ ಪಟ್ಟಣ ಠಾಣೆಯಲ್ಲಿ ದಾಸರಹಳ್ಳಿ ಶಾಸಕ ಮುನಿರಾಜು ದೂರು ನೀಡಿದ್ದರು.
ಅವರ ದೂರಿನಂತೆ ಜೆಡಿಎಸ್ ಅಭ್ಯರ್ಥಿ ಪುತ್ರ ಉದಯ್, ಹೊಡಿಕೆಹೊಸಹಳ್ಳಿ ನಾಗಣ್ಣ, ಜೆಡಿಎಸ್ ಅಭ್ಯರ್ಥಿ ಸಹೋದರ ಕರಿಯಪ್ಪ, ಲಾಯರ್ ಬೋಜೇಗೌಡ, ದರ್ಶನ್, ಮಂಗಳವಾರಪೇಟೆ ಅರುಣ, ಕೇಬಲ್ ಸತ್ಯನಾರಾಯಣ, ಕೂರಣಗೆರೆ ರವಿ, ಚಕ್ಕಲೂರು ಸಿ.ಎಸ್. ಕೃಷ್ಣ, ಮಂಗಳವಾರಪೇಟೆ ರಮೇಶ್, ಕಳ್ಳಿಹೊಸೂರು ರಮೇಶ್, ಪುರುಷೋತ್ತಮ, ಕೋಟಮಾರನಹಳ್ಳಿ ಚಂದ್ರ, ಮಾಜಿ ಜಿ.ಪಂ. ಸದಸ್ಯ ಸದಾನಂದ, ಕಳ್ಳಿಹೊಸೂರು ಕಾಂತ, ರಾಜಣ್ಣ, ಪಾರ್ಥ ಸೇರಿದಂತೆ 20 ಮಂದಿಯ ಮೇಲೆ ದೂರು ನೀಡಿದ್ದರು.
ಈ ಸಂಬಂಧ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವತ್ಥ್ ಅವರ ಪುತ್ರ ದರ್ಶನ್ನನ್ನು ಚುನಾವಣೆ ದಿನವೇ ಪೊಲೀಸರು ಬಂಧಿಸಿದ್ದರು, ಇದರಿಂದ ಕುಪಿತಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು ಅಂದು ರಸ್ತೆ ತಡೆ ನಡೆಸಿ, ಅವನನ್ನು ಬಿಡಿಸಿಕೊಂಡಿದ್ದರು.