ಚಿತ್ತಾಪುರ ಸೋಲಿಗೆ ತೀವ್ರ ಬೇಸರ : ಖರ್ಗೆ
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಖರ್ಗೆ ಸೋಲು ಜನತೆಯ ಸೋಲು ಎಂದು ನೊಂದು ನುಡಿದರು. ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 15 ತಿಂಗಳಾಯಿತು. ಜನರ ನಿರೀಕ್ಷೆಯಲ್ಲಿ ಸರಕಾರ ಕೆಲಸ ಮಾಡುತ್ತಿಲ್ಲ. ಸುಳ್ಳು ಭರವಸೆ ನೀಡುವುದಕ್ಕೆ ಬಿಜೆಪಿ ಸರಕಾರ ಎತ್ತಿದ ಕೈ ಎಂದು ಟೀಕಿಸಿದರು.
ಎರಡನೇ ಬಾರಿಗೆ ಗುಲ್ಬರ್ಗಾದಲ್ಲಿ ಸಚಿವ ಸಂಪುಟ ನಡೆಸಲು ವೇದಿಕೆ ಸಿದ್ಧಗೊಂಡಿದೆ. ಆದರೆ, ಸರಕಾರದ ಈ ಬೂಟಾಟಿಕೆಯಿಂದ ಯಾರಿಗೆ ಲಾಭವಾಗಿದೆ. ಕಳೆದ ಸಂಪುಟ ಸಭೆಯಲ್ಲಿ ನೀಡಿದ ಅನೇಕ ಭರವಸೆಗಳು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಹೀಗಿದ್ದರೂ ಮತ್ತೊಂದು ಸುತ್ತು ಜನರಿಗೆ ವಂಚಿಸಲು ಸಂಪುಟ ಸಭೆ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರದಿಂದ ಜನರ ಹಿತ ಕಾಪಾಡಲು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಹಾಗೂ ಕರಾವಳಿ ಪ್ರದೇಶಗಳಲ್ಲಿ ಇಂದಿಗೂ ನಡೆಯುತ್ತಿರುವ ಕೋಮುಗಲಭೆಗಳು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಕಿಡಿಕಾರಿದರು. ಚಿತ್ತಾಪುರದ ಜನತೆ ದೊಡ್ಡ ತಪ್ಪು ಮಾಡಿದರು. ಇದರ ಫಲ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಬಿಜೆಪಿ ಗೆಲ್ಲಿಸಿದ ಬಗ್ಗೆ ಚಿತ್ತಾಪುರದ ಜನತೆ ಅತ್ಮಾವಲೋಕನ ಮಾಡಿಕೊಳ್ಳುವ ದಿನ ಶೀಘ್ರ ಬರಲಿದೆ ಎಂದು ಭವಿಷ್ಯ ನುಡಿದರು.
(ದಟ್ಸ್ ಕನ್ನಡ ವಾರ್ತೆ)