ದೇವೇಗೌಡರ ಕುಟುಂಬದಳಿಯ ಪ್ರಿಯಕೃಷ್ಣ?
ಐದು ಕ್ಷೇತ್ರಗಳಲ್ಲಿ ಏಕೈಕ ಜಯಗಳಿಸಿ ಕಾಂಗ್ರೆಸ್ ಪಕ್ಷ ಹುಸಿನಗೆಯನ್ನು ಬೀರುತ್ತಿದ್ದರೆ, ಕಮಲಕ್ಕೆ ಕಪಾಳಮೋಕ್ಷದ ಹೊಡೆತದಿಂದ ಇನ್ನೂ ಹೊರಬರಲಾಗುತ್ತಿಲ್ಲ. ಯಡಿಯೂರಪ್ಪ ಬಂದು ಸಾಂತ್ವನ ಹೇಳಿದರೂ ಸೋಮಣ್ಣಗೆ ಸೋಲನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಇವೆರಡು ಪಕ್ಷಗಳ ನಡುವೆ ತಣ್ಣಗೆ ಸ್ಪರ್ಧೆಯಿಂದ ಹಿಂತೆಗೆದುಕೊಂಡ ಜಾತ್ಯತೀತ ಜನತಾದಳ ಮಾತ್ರ ಒಳಒಳಗೆ ಹುಳ್ಳಗೆ ನಗುತ್ತಿದೆ.
ಆಗಸ್ಟ್ 21ರಂದು ರಾಮನಗರ ಮತ್ತು ಚನ್ನಪಟ್ಟಣದ ಮತಎಣಿಕೆ ನಡೆಯುವಾಗ ಮತ್ತು ಫಲಿತಾಂಶ ಹೊರಬಿದ್ದಾಗ ಜೆಡಿಎಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದ್ದರು. ಜೆಡಿಎಸ್ ನ ಇಬ್ಬರೂ ಸ್ಪರ್ಧಾಳುಗಳು ಜಯಭೇರಿ ಬಾರಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ತಬ್ಬಿಬ್ಬಾಗಿದ್ದವು. ಜೆಡಿಎಸ್ ಕಾರ್ಯಕರ್ತರ ಹರ್ಷ ಮುಗಿಲು ಮುಟ್ಟಿತ್ತು. ಆದರೆ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ದೇವೇಗೌಡರ ಇಡೀ ಕುಟುಂಬದ ಲಕ್ಷ್ಯ ಮಾತ್ರ ರಾಮನಗರ ಮತ್ತು ಚನ್ನಪಟ್ಟಣದ ಮೇಲಿರದೆ ಗೋವಿಂದರಾಜ ನಗರ ಉಪಚುನಾವಣೆಯ ಮೇಲಿತ್ತು!
ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮದುವೆ, ಮಧುಚಂದ್ರ ಮತ್ತು ವಿಚ್ಛೇದನಗಳ ಪ್ರಕ್ರಿಯೆ ಮುಗಿದಿದ್ದರೂ ಜೆಡಿಎಸ್ ಮತ್ತೆ ಮರುಮದುವೆಗೆ ಸಿದ್ಧವಾಗಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಗೌಡರು ತಮ್ಮ ಪಕ್ಷದ ಅಭ್ಯರ್ಥಿ ನಾಗೇಂದ್ರ ಪ್ರಸಾದ್ ಅವರನ್ನು ಗೋವಿಂದರಾಜ ನಗರದಲ್ಲಿ ಸ್ಪರ್ಧೆಯಿಂದ ಹಿಂತೆಗೆದುಕೊಂಡಾಗ ಹೆಚ್ಚಿನ ಆಶ್ಚರ್ಯವಾಗಿದ್ದು ಜೆಡಿಎಸ್ ಕಾರ್ಯಕರ್ತರಿಗೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಳಒಳಗೇ ಒಪ್ಪಂದ ಮಾಡಿಕೊಂಡಿವೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದರು. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಮುಗುಮ್ಮಾಗಿದ್ದರು. ಆದರೆ, ನಮ್ಮ ಗೌಡರ ಮನದಿಂಗಿತವನ್ನು ಬಲ್ಲವರಾರು? ಗೌಡರ ಹುತ್ತದೊಳಗೊಂದು ಹುತ್ತ ಇರುವುದನ್ನು ಬಲ್ಲಿರೇನು?
ತಮ್ಮ ಅಭ್ಯರ್ಥಿಯನ್ನು ಗೌಡರು ಹಿಂತೆಗೆದುಕೊಂಡಿದ್ದರೂ ಗೌಡರ ಕುಟುಂಬ ಗೋವಿಂದರಾಜನಗರದ ಫಲಿತಾಂಶದ ಮೇಲೆ ಹೆಚ್ಚಿನ ಕಣ್ಣಿಟ್ಟಿದ್ದು ಅನೇಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. ಒಂದು ಬಲ್ಲ ಮೂಲದ ಪ್ರಕಾರ, ಕಾಂಗ್ರೆಸ್ ನ ಪ್ರಿಯಾಕೃಷ್ಣನ ಗೆಲುವಿಗಾಗಿ ದೇವೇಗೌಡರ ಕುಟುಂಬ ವಿಶೇಷ ಪೂಜೆಯನ್ನೂ ಮಾಡಿಸಿತ್ತು. ಪ್ರತಿಯೊಂದು ಹಂತದ ಮತಎಣಿಕೆಯಾದ ಮೇಲೂ ಗೌಡರ ಮನೆಯಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು. ಇದೆಲ್ಲದರ ಮೇಲ್ವಿಚಾರಣೆ ವಹಿಸಿದ್ದು ಗೌಡರ 'ಗೃಹಮಂತ್ರಿ' ಚೆನ್ನಮ್ಮನವರು. ಚೆನ್ನಮ್ಮಗೂ ರಾಜಕೀಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?
ಗುಮಾನಿ ಇಷ್ಟೆ. ಚುನಾವಣೆ ಸಂದರ್ಭದಲ್ಲಿ 25ರ ಹರೆಯದ ಪ್ರಿಯಾಕೃಷ್ಣ ಮತ್ತು ದೇವೇಗೌಡರ ಮೊಮ್ಮಗಳು 22ರ ಪ್ರಾಯದ ಕೀರ್ತನಾ ಅವರನ್ನು ಕೊಟ್ಟು ತಂದು ಮಾಡಿಕೊಳ್ಳುತ್ತಾರೆಂಬ ಗಾಸಿಪ್ಪು ಇಡೀ ವಿಧಾನಸಭಾ ಕ್ಷೇತ್ರದುದ್ದಕ್ಕೂ ಸಂಚರಿಸುತ್ತಿತ್ತು. ಎರಡು ಕುಟುಂಬಗಳ ನಡುವೆ ಅರಿಶಿನ ಕುಂಕುಮ, ಕುಪ್ಪುಸ ಖಣದ ವಿನಿಮಯ ನಡೆಯುತ್ತಿದೆ ಎಂಬ ಗುಸುಗುಸು ರಾಜಕೀಯದಂಗಳದಲ್ಲಿ ಬೇಜಾನ್ ಓಡಾಡುತ್ತಿತ್ತು.
ಇದು ಈಗ ಹೆಚ್ಚೂ ಕಡಿಮೆ ಖಚಿತವಾದಂತಾಗಿದೆಯಂತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮದುವೆ, ಮಧುಚಂದ್ರ ಮುಗಿದಿದ್ದರೂ, ಮತ್ತೊಂದು ರೀತಿಯ ನೆಂಟಸ್ತಿಕೆಗೆ ಎರಡೂ ಪಕ್ಷಗಳು ಸಜ್ಜಾಗಿವೆ ಎಂಬ ಮಾತಿನ ಮೆರವಣಿಗೆ ಹರದನಹಳ್ಳಿಯಿಂದ ಹೊರಟು, ಗೋವಿಂದರಾಜ ಕ್ಷೇತ್ರದಲ್ಲಿ ಸುತ್ತಾಡಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೆರೆದಾಡಿ, ಪದ್ಮನಾಭನಗರಕ್ಕೆ ಬಂದು ನಿಂತಿದೆ.