ಸೋತ ಯೋಗಿಗೆ ಸಿಎಂ ಸಾಂತ್ವನದ ಮುಲಾಮು
ಮಳೆ ನೀರು ನಂಬಿ ಗಡಿಗೆಯಲ್ಲಿದ್ದ ನೀರು ಚಲ್ಲಿದ ಎಂಬಂತೆ ಯೋಗೀಶ್ವರ್ ಕಾಂಗ್ರೆಸ್ ತೊರೆದು 'ಆಪರೇಷನ್ ಕಮಲ'ಕ್ಕೆ ಒಳಗಾಗಿ ಬಿಜೆಪಿ ಸೇರಿ ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರ ಹಾಗೂ ಚನ್ನಪಟ್ಟಣ ವಿಧಾನ ಸಭೆ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂಸಿ ಅಶ್ವತ್ಥ್ ವಿರುದ್ಧ ಯೋಗೀಶ್ವರ್ ಸೋಲುಂಡಿದ್ದಾರೆ.
ತಮ್ಮ, 12 ವರ್ಷದ ರಾಜಕೀಯ ಬದುಕಿನಲ್ಲಿ ಯೋಗೀಶ್ವರ್ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಎಡವಿದ್ದಾರೆ. ಈ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡಿರುವ ಅವರನ್ನು ಯಡಿಯೂರಪ್ಪ ಭೇಟಿ ಮಾಡಿ, ಸಾಂತ್ವನ ಹೇಳುವುದರ ಜತಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದಾರೆ.
ಈಗ ಲಭ್ಯವಿರುವ ಮಾಹಿತಿಯಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬೆಳೆಸಲು ಪಕ್ಷದ ಮುಖಂಡರು ತವಕಿಸುತ್ತಿದ್ದಾರೆ. ಅದರಂತೆ ಯೋಗೀಶ್ವರ್ಗೆ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿ, ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಚನ್ನಪಟ್ಟಣದಲ್ಲಿ ಯೋಗೀಶ್ವರ್ ಸೋತರೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈವರಗೆ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದೇ ಪಾರುಪತ್ಯ. ಈಗ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಜೆಡಿಎಸ್ಗಿಂತ ಬಿಜೆಪಿಗೆ ಉತ್ತಮ ಜನಬೆಂಬಲ ದೊರೆತಿದ್ದು, ಇದನ್ನು ಮನಗಂಡಿರುವ ಬಿಜೆಪಿ ವರಿಷ್ಠರು ಯೋಗೀಶ್ವರ್ಗೆ ಸೂಕ್ತ ಸ್ಥಾನ ಮಾನ ನೀಡಲಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.