ಎಬಿವಿಪಿ ಪ್ರತಿಭಟನೆ:ವಿದ್ಯಾರ್ಥಿಗಳಿಗೆ ಲಾಠಿ ರುಚಿ
ಬೆಂಗಳೂರು, ಆ. 21: ಸ್ನಾತಕೋತ್ತರ ಹಾಗೂ ಪದವಿ ಪ್ರವೇಶಕ್ಕೆ ಹೆಚ್ಚಿಸಿರುವ ಶುಲ್ಕ ಇಳಿಸಲು ಆಗ್ರಹಿಸಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಗುರುವಾರ ರಾಜ್ಯದ ವಿವಿಗಳು ಹಾಗು ನಾನಾ ಕಡೆ ಪ್ರತಿಭಟನೆ ನಡೆಸಿದ್ದು ಧಾರವಾಡದಲ್ಲಿ ಕರ್ನಾಟಕ ವಿವಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿತು.
ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಮತ್ತು ಪೋಲೀಸರ ಕಿರುಕುಳದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಛೇರಿಯ ಹೂಕುಂಡಗಳನ್ನು ಧ್ವಂಶ ಗೊಳಿಸಿ ಕುರ್ಚಿ ಮತ್ತು ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದರು. ಪ್ರತಿಭಟನಾಕಾರರ ಮೇಲೆ ಏಕಾಏಕಿ ಲಾಠಿ ಬೀಸಿದ ಪೊಲೀಸರು ಎಬಿವಿಪಿ ಮುಖಂಡರನ್ನು ಬಂಧಿಸಿದರು. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ್ ಠಾಣೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಮುಖಂಡರನ್ನು ಬಿಡುಗಡೆಗೊಳಿಸಿದರು.
ಶಿವಮೊಗ್ಗದಲ್ಲಿ ಸಂಘಟನೆಯ ಕಾರ್ಯಕರ್ತರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿ ಕೌನ್ಸಿಲಿಂಗ್ ರದ್ದುಗೊಳಿಸುವಂತೆ ಆಗ್ರಹಿಸಿದರು. ಹಾಸನ ಮತ್ತು ವಿಜಾಪುರದ ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)