ಬುರ್ಖಾ ಧರಿಸಲು ಅವಕಾಶ ಸಾಧ್ಯವಿಲ್ಲ : ಕಾಲೇಜ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯೇಷಾ ಬುರ್ಖಾ ಧರಿಸಿ ಬರಲು ಅನುಮತಿ ನೀಡಿದರೆ ಬೇರೆ ವಿದ್ಯಾರ್ಥಿಗಳು ಅಯ್ಯಪ್ಪಸ್ವಾಮಿ ಮಾಲೆ ಹಾಕಿದ್ದೇವೆ ಎಂದು ಕಪ್ಪುಬಟ್ಟೆ ಹಾಕಿ ಬಂದರೆ ಕಾಲೇಜಿಗೆ ಪ್ರವೇಶ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ. ಆಯೇಷಾ ಸ್ಕಾರ್ಫ್ ಅಲ್ಲ. ಅರ್ಧ ಬುರ್ಖಾ ಧರಿಸಿ ಬರುತ್ತಿದ್ದಳು. ಇದೇ ರೀತಿ ಬರುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿನಿಯ ಪೋಷಕರನ್ನು ಕರೆಸಿ ತಿಳಿ ಹೇಳಿದ್ದಕ್ಕೆ ಸಮ್ಮತಿಸಿದರು.
ಆಯೇಷಾ ಮತ್ತು ಆಕೆಯ ಪೋಷಕರು ಒಪ್ಪಿಕೊಳ್ಳಲಿಲ್ಲ. ಈಗ ಬುರ್ಕಾಗೆ ಅವಕಾಶ ಕೇಳುವವರು ನಾಳೆ ಐದು ಬಾರಿ ನಮಾಜಿಗೆ ಅವಕಾಶ ಕೋರಿದರೆ ಒಪ್ಪಲು ಸಾಧ್ಯವೇ ಎಂದು ಗಣೇಶ್ ಪ್ರಭು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣದಲ್ಲಿ ಧರ್ಮ ಬೆರೆಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಬಾಹ್ಯಶಕ್ತಿಗಳ ಒತ್ತಡವಿದೆ. ಹಾಗಾಗಿ ಬುರ್ಖಾ ನಿಷೇಧ ಅನಿವಾರ್ಯ ಎಂದರು. ಸಂಘಟನೆಗಳ ಹೆಸರು ಹೇಳು ನಿರಾಕರಿಸಿದರು.
ಸಮಾನ ವಸ್ತ್ರ ಸಂಹಿತೆ ಅಗತ್ಯ : ಹೆಗ್ಗಡೆ
ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ವಸ್ತ್ರ ಮತ್ತು ಸಂಹಿತೆ ಅನುಷ್ಛಾನ ಅಗತ್ಯವಿದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಪ್ರತಿಪಾದಿಸಿದ್ದಾರೆ. ಸಮಾನ ವಸ್ತ್ರ ಸಂಹಿತೆ ಅಳವಡಿಕೆಯಿಂದ ತರಗತಿಯಲ್ಲಿನ ತಾರತಮ್ಯಕ್ಕೆ ಅವಕಾಶ ಇರುವುದಿಲ್ಲ. ಅಷ್ಟೆ ಅಲ್ಲ, ಅದು ಸಾಮಾಜಿಕ-ಆರ್ಥಿಕ-ಸಮಾನತೆ ಸಾರುತ್ತದೆ ಎಂದರು.
ಸಚಿವರಿಗೆ ಮಾಹಿತಿಯೇ ಇಲ್ಲ
ಬಂಟ್ವಾಳದ ಎಸ್ ವಿಎಸ್ ಕಾಲೇಜಿನಲ್ಲಿ ಬುರ್ಖಾ, ಸ್ಕಾರ್ಫ್ ನಿಷೇಧ ವಿವಾದ ಭಾರಿ ಸುದ್ದಿ ಮಾಡಿದ್ದರೆ, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಗೆ ಮಾತ್ರ ಈ ಸುದ್ದಿಯ ಮಾಹಿತಿ ಇಲ್ಲ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಏನೂ ಗೊತ್ತಿಲ್ಲ. ಪ್ರಕರಣದ ಕುರಿತು ವರದಿ ತರಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)