ಬಿಜೆಪಿ ಪಾಲಿಗೆ ರಾವಣನಾದೆ : ಜಸ್ವಂತ್ ಸಿಂಗ್
ಇಲ್ಲಿ ನಡೆದಿರುವ ಬಿಜೆಪಿಯ ಚಿಂತನಾ ಬೈಠಕ್ ನಲ್ಲಿ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ ಕ್ರಮದಿಂದ ತೀವ್ರವಾಗಿ ನೊಂದಿರುವ ಅವರು, ಇದು ನನ್ನ ರಾಜಕೀಯ ಜೀವನದ ಅತ್ಯಂತ ದುಖಃದಾಯಕ ದಿನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪಕ್ಷದಿಂದ ಉಚ್ಚಾಟಿಸಿರುವ ವಿಷಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ದೂರವಾಣಿ ಮೂಲಕ ತಿಳಿಸಿದರು. ಬಿಜೆಪಿ ನನ್ನನ್ನು ಉಚ್ಚಾಟನೆ ಮಾಡಬೇಕು ಎಂದು ತೀರ್ಮಾನ ತೆಗೆದುಕೊಂಡಿತ್ತು ಎನ್ನುವುದಾದರೆ, ನನ್ನನ್ನು ಶಿಮ್ಲಾಕ್ಕೆ ಕರೆಸಿಕೊಳ್ಳುವ ಅಗತ್ಯವೇನಿತ್ತು. ನವದೆಹಲಿಯಲ್ಲಿಯೇ ಈ ವಿಷಯ ತಿಳಿಸಬಹುದಾಗಿತ್ತು. ಆದರೆ, ಉದ್ದೇಶ ಪೂರ್ವಕವಾಗಿ ನನ್ನು ಇಲ್ಲಿಯವರೆಗೆ ಕರೆಸಿ ಉಚ್ಚಾಟಿಸಿ ಅವಮಾನ ಮಾಡುವ ಅಗತ್ಯವಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸಿದೆ. ನಂತರ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡೆ. ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ರಾಜಕೀಯ ಮಾಡಿದ ನನಗೆ, ಇಂತಹ ಶಿಕ್ಷೆಯನ್ನು ನಿರೀಕ್ಷಿಸಿರಲಿಲ್ಲ. ಆದರೆ, ಒಂದು ಮಾತಂತೂ ನಿಜ. ಬಿಜೆಪಿ ನಾಯಕರು ನಾನು ಬರೆದಿರುವ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಪುಸ್ತಕವನ್ನು ಪೂರ್ಣವಾಗಿ ಓದಿಲ್ಲ ಎನ್ನುವುದು ಖಚಿತವಾಗಿದೆ.
ನನ್ನ ಪುಸ್ತಕದಲ್ಲಿ ಜಿನ್ನಾ ಶ್ಲಾಘನೆ ಇರುವುದು ನಿಜ. ಅದನ್ನು ನಾನು ಈಗಲೂ ಸಮರ್ಥಿಸಿಕೊಳ್ಳಿವೆ. ನೆಹರು ಮತ್ತು ಪಟೇಲ್ ಬಗ್ಗೆ ನಾನು ಮಾಡಿದ ಆರೋಪಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳನ್ನು ಒದಗಿಸಲು ಸಿದ್ಧ ಎಂದು ಜಸ್ವಂತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಿಂದ ಉಚ್ಚಾಟಿಸಲು ಮೊದಲು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗುತ್ತೆ. ಆದರೆ, ನನ್ನ ವಿಷಯದಲ್ಲಿ ಪಕ್ಷ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಏಕಾಏಕಿ ಇಂದು ನಡೆದ ಬೈಠಕ್ ನಲ್ಲಿ ಉಚ್ಚಾಟನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
(ಏಜನ್ಸೀಸ್)