ಜಿನ್ನಾ ಪುಸ್ತಕ : ಜಸ್ವಂತ್ ವಿರುದ್ಧ ಬಿಜೆಪಿ ಕೆಂಡ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಜಸ್ವಂತ್ ಬರೆದಿರುವ ಜಿನ್ನಾ ಕುರಿತ ಬರವಣಿಗೆ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇದೊಂದು ಪಕ್ಷ ವಿರೋಧಿ ಕೆಲಸ ಕೂಡಾ. ಯಾವ ಕಾರಣಕ್ಕೂ ಜಿನ್ನಾ ಪ್ರಶಂಸೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಖಂಡ ಭಾರತವನ್ನು ಇಬ್ಬಾಗ ಮಾಡಿ ಪಾಕಿಸ್ತಾನ ರಚಿಸಿರುವುದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆ ನೋವಿನ ಸಂಗತಿಯನ್ನು ಭಾರತದ ಪ್ರಜೆ ಕೂಡಾ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆರ್ಎಸ್ ಎಸ್ ವಿರೋಧ
ಜಸ್ವಂತ್ ಸಿಂಗ್ ಬರೆದಿರುವ ಜಿನ್ನಾ ಇಂಜಿಯಾ ಪಾರ್ಟಿಸಿಪೇಷನ್ ಪುಸ್ತಕವನ್ನು ನಾನು ಓದುವುದಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಹೇಳುವುದಾದರೆ, ಜಸ್ವಂತ್ ಸಿಂಗ್ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆರ್ ಎಸ್ಎಸ್ ವಕ್ತಾರ ರಾಮ್ ಮಾದವ್ ಸ್ಪಷ್ಟಪಡಿಸಿದ್ದಾರೆ. ಜಸ್ವಂತ್ ಸಿಂಗ್ ಕ್ರಮಕೈಗೊಳ್ಳುವುದು ಬಿಡುವುದು ಪಕ್ಷದ ವಿಚಾರ. ಇದರ ಬಗ್ಗೆ ನಾನೇನು ಹೆಚ್ಚಪು ತಲೆಕೆಡಿಸಿಕೊಳ್ಳುವುದಿಲ್ಲ. ಜಸ್ವಂತ್ ಸಿಂಗ್ ಅವರ ಜಿನ್ನಾ ಬಗ್ಗೆ ಆಡಿರುವ ಮಾತುಗಳು ಭಾರತದ ವಿರೋಧಿ ಕೆಲಸವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ರಾಷ್ಟ್ರಪಿತ ಮಹಮ್ಮದ್ ಆಲಿ ಜಿನ್ನಾ ಅವರನ್ನು ಪ್ರಶಂಸಿಸಿ ಬಿಜೆಪಿ ಧುರೀಣ ಎಲ್ ಕೆ ಆಡ್ವಾಣಿ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು ಜಿನ್ನಾ ಗುಣಗಾನ ಮಾಡಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ.
ಜವಹರ್ ಲಾಲ್ ನೆಹರೂ ಅವರಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಇದ್ದ ನಂಬಿಕೆಯಿಂದಾಗಿ ದೇಶ ವಿಭಜನೆಯಾಯಿತಾದರೂ ಭಾರತದಲ್ಲಿ ಜಿನ್ನಾ ಅವರ ಬಗ್ಗೆ ಕೆಟ್ಟ ಭಾವನೆ ಮೂಡಿಸಲಾಗಿದೆ. ಭಾರತದಲ್ಲಿ ಮುಸ್ಲಿಂ ಬಾಂಧವರನ್ನು ಹೊರಗಿನವರಂತೆ ಕಾಣಲಾಗುತ್ತಿದೆ ಎಂದು ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಜಸ್ವಂತ್ ವಿಷಾದ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಪಕ್ಷದ ಬೃಹತ್ ಬಲದೆದುರು ಏಕಾಂಗಿಯಾಗಿ ಸವಾಲೆಸೆದ ಜಿನ್ನಾ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಜಿನ್ನಾ ಅವರನ್ನು ಮಹಾತ್ಮ ಗಾಂಧಿಜಿಯವರೇ ಮಹಾನ್ ಭಾರತೀಯ ಎಂದು ಪ್ರಶಂಸಿಸಿದ್ದರು. ಗಾಂಧೀಜಿಯವರು ಏಕೆ ಈ ರೀತಿ ಪ್ರಶಂಸೆ ಮಾಡಿದರೆಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಜಸ್ವಂತ್ ಸಿಂಗ್ ಪ್ರಶ್ನಿಸಿದ್ದರು.
(ಏಜನ್ಸೀಸ್)