5 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ
ರಾಮನಗರ ಶೇ. 33 ಮತ್ತು ಚನ್ನಪಟ್ಟಣದಲ್ಲಿ ಶೇ. 30 ರಷ್ಟು ಮತದಾನವಾಗಿದೆ. ಕೊಳ್ಳೇಗಾಲದಲ್ಲಿ ಶೇ.25ರಷ್ಟು ಮತದಾನವಾಗಿದೆ. ಚಿತ್ತಾಪುರ ಹಾಗೂ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಆರಂಭದಲ್ಲಿ ಜನರಿಂದ ನೀರಸ ಪ್ರತಿಕ್ರಿಯೆ ಬಂದಿದ್ದು, ನಂತರ ಸುಧಾರಿಸಿಕೊಂಡಿದ್ದು, ಶೇ. 25 ರಷ್ಟು ಮತದಾನವಾಗಿದೆ.
ಚನ್ನಪಟ್ಟಣದಲ್ಲಿ ಕಳ್ಳಿಹೊಸೂರು ಗ್ರಾಮದಲ್ಲಿ ಮತದಾನಕ್ಕೆ ಆಗಮಿಸಿದ್ದ ಮಾಜಿ ಸಚಿವ ಎಂ ವರದೇಗೌಡರ ಸಂಬಂಧಿ ಕೋಮಲಮ್ಮ (80) ಎಂಬುವವರಿಗೆ ತೀವ್ರ ಹೃದಯಘಾತವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಇದರಿಂದ ಮತದಾನ ಕೆಲ ಕಾಲ ಸ್ಥಗಿತಗೊಂಡಿತ್ತು. ಉಳಿದಂತೆ ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ಬಿರುಸಿನಿಂದ ಮತದಾನ ಸಾಗಿದೆ.
ರಾಮನಗರದಲ್ಲಿ ಬಿರುಸಿನಿಂದ ಮತದಾನ ಶುರುವಾಗಿದೆ. ಆದರೆ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಸಿದ್ದಯ್ಯದೊಡ್ಡಿ ಗ್ರಾಮದ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ಕನಕಪುರ ಕ್ಷೇತ್ರದಿಂದ ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವ ಸಿದ್ದಯ್ಯದೊಡ್ಡಿ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ, ಬಸ್ ವ್ಯವಸ್ಥೆ ಇಲ್ಲ ಎಂಬ ಆರೋಪದ ಮೇರೆಗೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
ಕೊಳ್ಳೇಗಾಲದದಲ್ಲಿ ಶೇ. 25 ರಷ್ಟು ಮತದಾನವಾಗಿದೆ. ಆರಂಭದಲ್ಲಿ ಕೊಳ್ಳೇಗಾಲದ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನಕ್ಕೆ ಅಡ್ಡಿ, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದ ಕಾರಣ ಅನೇಕರು ಮತದಾನದಿಂದ ವಂಚಿತರಾಗಬೇಕಾಯಿತು. ಪಟ್ಟೇಗಾರಪಾಳ್ಯದ ಅನೇಕ ಮತದಾರರು ವಾಪಸ್ ತೆರಳಿದರು. ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ನಂತರ ಪ್ರತಿಕ್ರಿಯೆ ನೀಡಿದ ಪ್ರಿಯಾಕೃಷ್ಣ, ರಾಜ್ಯ ಆಡಳಿತರೂಢ ಸರಕಾರ ಅಧಿಕಾರಯಂತ್ರವನ್ನು ಸಂಪೂರ್ಣ ದುರುಪಯೋಗಪಡಿಸಿಕೊಂಡಿದೆ. ಪೊಲೀಸರು, ಮತಗಟ್ಟೆ ಅಧಿಕಾರಿಗಳು ಸಹಕರಿಸುತ್ತಿಲ್ಲ. ಪಟ್ಟೆಗಾರಪಾಳ್ಯದಲ್ಲಿ ವಾಸಿಸುವವರು ಅಲ್ಪಸಂಖ್ಯಾತರು, ಆದರೆ, ಅಲ್ಲಿನವರಿಗೆ ಹೆಸರುಗಳು ಮತಪಟ್ಟಿಯಲ್ಲಿ ಇಲ್ಲ. ಪೊಲೀಸರು ಕೂಡಾ ಬಂದಿರುವ ಅನೇಕ ಜನರನ್ನು ವಾಪಸ್ಸು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ಚಿತ್ತಾಪುರದಲ್ಲಿ ಶಾಂತಿಯುವ ಮತದಾನ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)