20 ಟಿಎಂಸಿ ಕಾವೇರಿ ನೀರು ಕೊಡಿ : ತಮಿಳುನಾಡು
ಚೆನ್ನೈ, ಆ. 18 : ಕಾವೇರಿ ನ್ಯಾಯಮಂಡಳಿ ಮಧ್ಯಂತರ ಆದೇಶದ ಅನ್ವಯ ಬಿಡುಗಡೆ ಮಾಡಬೇಕಾಗಿರುವ 20 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ತಕ್ಷಣ ಬಿಡುಗಡೆ ಮಾಡಬೇಕೆ೦ದು ತಮಿಳುನಾಡು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ರಾಮಸುಬ್ರಮಣ್ಯಂ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸೌಹಾರ್ದಯುತ ಮಾತುಕತೆಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಾವೇರಿ ಕಣಿವೆಗಳ ರಾಜ್ಯಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತ, ಕಾವೇರಿ ಕಣಿವೆಯ ನಾಲ್ಕೂ ಜಲವಿದ್ಯುತ್ ಯೋಜನೆಗಳನ್ನು ಜಾರಿಗೆ ಮಾಡುವುದರ ಬಗ್ಗೆ ತಮ್ಮ ರಾಜ್ಯದ ತಕರಾರಿಲ್ಲ. ಆದರೆ ಕಾವೇರಿ ನೀರು ಹಂಚಿಕೆ ವಿವಾದವು ಬಾಕಿ ಇರುವಾಗ ಕರ್ನಾಟಕ ಸರಕಾರವು ಶಿವನಸಮುದ್ರ ಜಲವಿದ್ಯುತ್ ಯೋಜನೆಯನ್ನು ಜಾರಿ ಮಾಡುವುದು ಸರಿಯಲ್ಲ ಎಂದು ರಾಮಸುಬ್ರಮಣ್ಯಂ ಹೇಳಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಇತ್ತೀಚಿಗೆ ಎಲ್ಲಾ ಅಂತರರಾಜ್ಯ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಉಭಯ ರಾಜ್ಯಗಳ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ನಡೆದಿರುವುದು ಮಹತ್ವದ ಬೆಳವಣಿಗೆಯಾಗಿದೆ.
(ದಟ್ಸ್ ಕನ್ನಡ ವಾರ್ತೆ)