ಚೆನ್ನೈ : ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ
ಚೆನ್ನೈ, ಆ. 13 : ಬೆಂಗಳೂರಿನಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆ ಅನಾವರಣದಷ್ಟೇ ಅದ್ಧೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೂ ಬುಧವಾರ ಆರ್ ಪಿಎಫ್ ಮೈದಾನ ಮತ್ತು ಜೀವಾ ಪಾರ್ಕ್ ನಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ.
ಕಾರ್ಯಕ್ರಮ ನಡೆಯುವ ಆರ್ ಪಿಎಫ್ ಮೈದಾನಕ್ಕೂ ಪ್ರತಿಮೆ ಅನಾವರಣಗೊಳ್ಳಲಿರುವ ಜೀವಾ ಪಾರ್ಕ್ ಗೂ 1.5 ಕಿಮೀ ಅಂತರವಿದೆ. ಮೈದಾನದಲ್ಲಿ ಅಂದಾಜು 10 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೂವರೆ ಸಾವಿರ ಪೊಲೀಸರು ಮೈದಾನದ ಹೊರಗೆ ಮತ್ತು ಒಳಗೆ ನಿಯೋಜಿಸಲಾಗಿದೆ. ಎಲ್ಲ 5 ಪ್ರವೇಶ ದ್ವಾರದಲ್ಲೂ ಲೋಹ ಶೋಧಕ ಬಾಗಿಲುಗಳನ್ನು ನಿರ್ಮಿಸಲಾಗಿದೆ.
ಇದರ ಜೊತೆಗೆ ಜೀವಾ ಪಾರ್ಕ್ ಸಿಂಗಾರಗೊಂಡಿದ್ದು, ನಳನಳಿಸತೊಡಗಿದೆ. ಉದ್ಯಾನದ ಸುತ್ತಮುತ್ತಲಿನ ರಸ್ತೆಗಳು ಡಾಂಬರೀಕರಣ ಕಂಡಿವೆ. ತ್ರಿಕೋನಾಕಾರದ ಉದ್ಯಾನಕ್ಕೆ ಹುಲ್ಲು ಹಾಸು, ಸುಖಾಸೀನ ಮತ್ತು ವಿದ್ಯುತ್ ದೀಪಾಲಂಕಾರ ಒದಗಿಸಲಾಗಿದೆ.
(ಏಜನ್ಸೀಸ್)