ಯಡಿಯೂರಪ್ಪ ಇನ್ನು ಮುಂದೆ ಚಿನ್ನತಂಬಿ
ಹಾಸನ, ಆ.12: ನಿಜಲಿಂಗಪ್ಪ, ಜೆ ಎಚ್ ಪಟೇಲ್, ಎಸ್ ಎಂ ಕೃಷ್ಣ, ದೇವೇಗೌಡ ಮುಂತಾದವರು ರಾಜ್ಯದ ಮುಖ್ಯಮಂತ್ರಿ ಆದಾಗಿನಿಂದಲೂ ಕನ್ನಡಪರ ಹೋರಾಟವನ್ನು ನಡೆಸುತ್ತಾ ಬಂದಿದ್ದೇನೆ. ನನ್ನ 50 ವರ್ಷದ ಹೋರಾಟದಲ್ಲಿ ಇಂತಹ ಮಾನಸಿಕ ಮತ್ತು ದೈಹಿಕ ನೋವನ್ನು ಅನುಭವಿಸಿರಲಿಲ್ಲ. ಮುಖ್ಯಮಂತ್ರಿ ಅವರನ್ನು ಇನ್ನು ಮುಂದೆ ಯಡಿಯೂರಪ್ಪ ಎಂದು ಕರೆಯುವುದಿಲ್ಲ ಬದಲಾಗಿ 'ಚಿನ್ನತಂಬಿ' ಎಂದು ಕರೆಯುತ್ತೇನೆ ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಾಟಾಳ್, ನನ್ನ ಬಂಧನದ ಹಿಂದೆ ನೇರ ಮುಖ್ಯಮಂತ್ರಿಗಳ ಕೈವಾಡವಿದೆ. ಇಲ್ಲ ಸಲ್ಲದ ಮೊಕದ್ದಮೆಗಳನ್ನು ನನ್ನ ಮೇಲೆ ಹೊರಿಸಿ ಜಾಮೀನು ಸಿಗದಂತೆ ಮಾಡಿದ್ದರು. ನಾವೇನೂ ಭಯೋತ್ಪಾದನಾ ಕ್ರತ್ಯ ನಡೆಸುತ್ತಿಲ್ಲ. ಚಿನ್ನತಂಬಿ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ತಮಿಳುನಾಡಿನ ಉಪ ಮುಖ್ಯಮಂತ್ರಿಯೋ ಎಂದು ಕಿಡಿಕಾರಿದ್ದಾರೆ.
ಕನ್ನಡಿಗರ ಸ್ವಾಭಿಮಾನದ ಜೊತೆ ಆಟವಾಡುತ್ತಿರುವ ಚಿನ್ನತಂಬಿ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನರ್ಹರು. ಜೈಲಿನಲ್ಲಿ ನನ್ನನ್ನು ಸಾಮನ್ಯ ಕೈದಿಗಳ ಹಾಗೆ ನಡೆಸಿಕೊಳ್ಳಲಾಯಿತು, ನನ್ನ ಜೀವನದಲ್ಲಿ ಇದುವರೆಗೆ ಇಂತಹ ಸರ್ವಾಧಿಕಾರಿ ಮುಖ್ಯಮಂತ್ರಿಯನ್ನು ನೋಡಿರಲಿಲ್ಲ. ನನ್ನ ಹೋರಾಟ ಇನ್ನೂ ಮುಂದುವರಿಯುತ್ತದೆ, ಸಂಘಟನೆಗಳ ವಿರೋಧದ ನಡುವೆಯೂ ತಿರುವಳ್ಳವರ್ ಪ್ರತಿಮೆ ಅನಾವರಣ ಮಾಡಿರುವುದು ಅಕ್ಷ್ಯಮ್ಯ ಅಪರಾಧ ಎಂದು ವಾಟಾಳ್ ಚಿನ್ನತಂಬಿ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)