ಪುಣೆಯಲ್ಲಿ ಮತ್ತೊಬ್ಬ ಬಾಲಕಿ ಬಲಿ
ಪುಣೆಯ ಅಹಿಲ್ಯದೇವಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಶ್ರುತಿ ಗವಾಡೆ ಇಂದು ನಸುಕಿನ ಜಾವ ಸಾವನ್ನಪ್ಪಿದ್ದಾಳೆ. ಶ್ರುತಿ ನಾರಾಯಣ ಪೇಟೆಯ ನಿವಾಸಿಯಾಗಿದ್ದು, ಹಂದಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಗಸ್ಟ್ 7 ರಿಂದ ಆಕೆಯನ್ನು ತುರ್ತುನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಮ್ಮ ಆಸ್ಪತ್ರೆಗೆ ದಾಖಲಾದಾಗಲೇ ಶ್ರುತಿ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು. ನಾವು ಭಾರೀ ಪ್ರಯತ್ನ ಮಾಡಿದರೂ ಜೀವ ಉಳಿಸಲು ವಿಫಲವಾದೆವು ಎಂದು ಶ್ರುತಿ ಆರೋಗ್ಯ ತಪಾಸಣೆ ಮಾಡುತ್ತಿದ್ದ ಸಸೂನ್ ಆಸ್ಪತ್ರೆಯ ವೈದ್ಯ ಡಾ ಪಾಂಡುರಂಗ ಪವಾರ್ ತಿಳಿಸಿದ್ದಾರೆ.
ಶ್ರುತಿಗೆ ಟಾಮಿಪ್ಲು ಮಾತ್ರೆಯನ್ನು ನೀಡಲಾಗಿತ್ತು. ಆದರೆ, ಆಕೆ ಕಫ ಮತ್ತು ಉಸಿರಾಟದ ತೊಂದರೆ ಬಳಲುತ್ತಿದ್ದಳು. ಪುಣೆ ನಗರವೊಂದರಲ್ಲೇ 6 ಮಂದಿ ಹಂದಿಜ್ವರ ಸಾವನ್ನಪಿದ್ದಾರೆ. ಹಂದಿಜ್ವರದಿಂದ ತೀವ್ರ ಬಳಲುತ್ತಿದ್ದ ಪಾರ್ಮಸಿಸ್ಟ್ ಸಂಜಯ ಬಾವಾಸಾಹೇಬ್ (35) ಸಸೂನ್ ಆಸ್ಪತ್ರೆಯಲ್ಲೇ ಈಗಾಗಲೇ ಮೃತಪಟ್ಟಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಮೇಲೆ ಹಂದಿಜ್ವರ ಕರಿನೆರಳು
ಹಂದಿಜ್ವರದ ಬಾಧೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಗೂ ತಟ್ಟಿದ್ದು, ಮಲೇಷಿಯಾ ತಂಡದ ಕೋಚ್ ಮಿಸ್ಬನ್ ಸಿಡೆಕ್ ಅವರಿಗೆ ಹಂದಿಜ್ವರದ ಸೋಂಕು ಕಾಣಿಸಿಕೊಂಡಿದೆ. ಗಂಟಲು ಹಾಗೂ ಎದೆ ನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಿ, ಪರೀಕ್ಷೆ ನಡೆಸಿದಾಗ ಹಂದಿಜ್ವರ ಇರುವುದು ಪತ್ತೆಯಾಗಿದೆ. ಹಂದಿಜ್ವರದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟೂರ್ನಾಮೆಂಟ್ ನ ಮುಖ್ಯಸ್ಥ ಪುಲ್ಲೇಲು ಗೋಪಿಚಂದ್ ಹೇಳಿದ್ದಾರೆ.
ಪಂದ್ಯಾವಳಿಯಲ್ಲಿ 42 ದೇಶಗಳ 250 ಆಟಗಾರರು ಭಾಗವಹಿಸಿದ್ದಾರೆ. 6 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಗಳಿಗೆ ಉಗ್ರರ ದಾಳಿಯ ಎಚ್ಚರಿಕೆಯೂ ಇದೆ.
(ಏಜನ್ಸೀಸ್)