ಎಚ್ 1ಎನ್ 1ಆತಂಕ ಬೇಡ :ಡಾ. ರಾಜು
ಮೈಸೂರು, ಆ. 11 : ಮೈಸೂರು ಜಿಲ್ಲೆಯಲ್ಲಿ ಇನ್ಫ್ಲೂಯೆಂಜಾ ಎಚ್ 1 ಎನ್ 1 ಜ್ವರದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸಾರ್ವಜನಿಕರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ವಿ ರಾಜು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐದು ಶಂಕಿತ ಪ್ರಕರಣಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವೆಲ್ಲವೂ ನೆಗೆಟಿವ್ ಎಂದು ವರದಿಯಾಗಿವೆ ಎಂದರು. ಹೆಚ್ 1 ಎನ್ 1 ಪ್ರಕರಣ ವರದಿಯಾದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ಮೈಸೂರು ನಗರದ ಪಿ.ಕೆ.ಟಿ.ಬಿ. ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಜೆ ಎಸ್ ಎಸ್ ಆಸ್ಪತ್ರೆ ಹತ್ತು ಬೆಡ್ಗಳು ಹಾಗೂ ಅಪೋಲೋ ಆಸ್ಪತ್ರೆಯಲ್ಲಿ 5 ಬೆಡ್ಗಳನ್ನು ಕಾದಿರಿಸಲಾಗಿದೆ. ಕೊಲಂಬಿಯಾ ಏಷಿಯಾ, ರೈಲ್ವೆ ಆಸ್ಪತ್ರೆ, ಎ ಎಸ್ ಐ ಆಸ್ಪತ್ರೆಗಳಲ್ಲಿ ಸಹ ಬೆಡ್ಗಳನ್ನು ಕಾಯ್ದಿರಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಯೂ ಆಗಿರುವ ಡಾ ನಾಗರಾಜ್ ಅವರನ್ನು ಹೆಚ್ 1 ಎನ್ 1 ಸಮನ್ವಯಾಧಿಕಾರಿಯನ್ನಾಗಿ ನೇಮಿಸಿದೆ. ರೋಗಲಕ್ಷಣ ಇರುವ ಯಾವುದೇ ಪ್ರಕರಣ ಕಂಡುಬಂದಲ್ಲಿ ಅವರ ಗಮನಕ್ಕೆ ತರುವಂತೆ ಸಭೆಯಲ್ಲಿ ಹಾಜರಿದ್ದು, ವಿವಿಧ ಆಸ್ಪತ್ರೆಗಳ ಪ್ರತಿನಿಧಿಗಳಿಗೆ ತಿಳಿಸಲಾಯಿತು. ಹೆಚ್ಚಿನ ಪರೀಕ್ಷೆ ನಡೆಸಿ ಹೆಚ್ 1 ಎನ್ 1 ದೃಢಪಟ್ಟಲ್ಲಿ ಕೂಡಲೇ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳ ಸಂಗ್ರಹ, ರಕ್ಷಣಾ ಉಪಕರಣಗಳ ಸಂಗ್ರಹ ಇದೆ. ವೈದ್ಯರು ಈ ಕುರಿತ ಮಾಹಿತಿಗೆ ಡಾ ನಾಗರಾಜ್ ದೂರವಾಣಿ 9845011042 ಮೂಲಕ ಸಂಪರ್ಕಿಸಬಹುದಾಗಿದೆ.
ಇತರೆ ಜ್ವರದ ಲಕ್ಷಣದಂತೆಯೇ ಈ ಜ್ವರದ ಲಕ್ಷಣಗಳಿದ್ದು 5 ದಿನಕ್ಕೂ ಹೆಚ್ಚಿಗೆ ಜ್ವರ, ಕೆಮ್ಮು, ಮೈಕೈನೋವು, ಗಂಟಲುನೋವು ಇದ್ದಲ್ಲಿ ವೈದ್ಯರ ಸಲಹೆ ಪಡೆದು ಹೆಚ್ಚಿನ ಪರೀಕ್ಷೆಗೆ ಒಳಪಡಬಹುದು. ಸಕಾಲದಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಡಾ ರಾಜು ಹೇಳಿದರು. ಬೆಂಗಳೂರಿನಿಂದ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ ಪಾಲೇಮಾರ್, ಈವರೆಗೆ ಸೋಂಕು ಖಚಿತಪಡಿಸಿಕೊಳ್ಳಲು ಪುಣೆಗೆ ಮಾದರಿ ಕಳುಹಿಸಬೇಕಿತ್ತು. ಈಗ ಬೆಂಗಳೂರಿನ ನಿಮ್ಹಾನ್ಸ್ನಲ್ಲಿಯೇ ವ್ಯವಸ್ಥೆ ಮಾಡಲಾಗಿದ್ದು 24 ಗಂಟೆಗಳ ಒಳಗೆ ಫಲಿತಾಂಶ ದೊರೆಯುತ್ತಿದೆ. ರಾಜ್ಯಮಟ್ಟದಲ್ಲಿಯೂ ಔಷಧ ಸಂಗ್ರಹ ಸಾಕಷ್ಟಿದೆ. ಜನತೆ ಆತಂಕ ಪಡಬೇಕಾಗಿಲ್ಲ ಎಂದರು.
(ದಟ್ಸ್ ಕನ್ನಡ ವಾರ್ತೆ)