ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ ನಿಮ್ಮ ಕೈಗೆ
ರಾಷ್ಟಾದ್ಯಂತ 77 ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದ್ದು ಮೊದಲ ಕೇಂದ್ರ ಬೆಂಗಳೂರು ಮತ್ತು ಚಂಡೀಗಢದಲ್ಲಿ ಆರಂಭವಾಗಲಿವೆ. ಈ ಕೇಂದ್ರಗಳ ಕಾರ್ಯಕ್ಷಮತೆ ಮತ್ತು ಜನಮನ್ನಣೆಯನ್ನು ಗಮನಿಸಿ ಇತರ ನಗರಗಳಲ್ಲಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್ ಹೇಳಿದ್ದಾರೆ.
ಪಾಸ್ ಪೋರ್ಟ್ ಅರ್ಜಿಗಳನ್ನು ಪರಿಷ್ಕರಿಸಲು ಈಗ ತಿನ್ನುತ್ತಿರುವ ಸಮಯವನ್ನು ಕಡಿತಗೊಳಿಸುವುದು ಹಾಗೂ ಪಾಸ್ ಪೋರ್ಟ್ ಕಚೇರಿಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಪಾಸ್ಪೋರ್ಟ್ ಅರ್ಜಿದಾರರಿಂದ ಹಣ ಕೀಳುವ ದಲ್ಲಾಳಿಗಳನ್ನು ನಿವಾರಿಸುವುದು ಇಲಾಖೆಯ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಮತ್ತು ಇದಕ್ಕಾಗಿ ಪೊಲೀಸ್ ಪಡೆಯ ಸಹಾಯ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಮತ್ತು ಪಾರ್ಸೋರ್ಟಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ಉತ್ತರಿಸಲು ರಾಷ್ಟ್ರ ಮಟ್ಟದಲ್ಲಿ ಎರಡು ಕಾಲ್ ಸೆಂಟರ್ ಗಳನ್ನು ತೆರೆಯುವ ಯೋಜನೆಯೂ ಇದೆ ಅವರು ಹೇಳಿದ್ದಾರೆ.
ಸಾವಿರ ಕೋಟಿ ರು. ಬಂಡವಾಳದ ಪಾಸ್ಪೋರ್ಟ್ ಯಾಂತ್ರೀಕರಣ ಯೋಜನೆಯ ಅನುಷ್ಠಾನಕ್ಕೆ ವಿದೇಶಾಂಗ ಸಚಿವಾಲಯ ಸಾಫ್ಟ್ ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಜೊತೆ ಒಪ್ಪಂದ ಮಾಡಿಕೊಂಡಿದೆ. ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿ ಕೇಂದ್ರ ಪ್ರಾರಂಭಿಸಿರುವ ಅತಿ ಬೃಹತ್ ಯೋಜನೆ ಇದು.
(ದಟ್ಸ್ ಕನ್ನಡ ವಾರ್ತೆ)