ಅಂಕ ನೀಡಲು ಲಂಚ ಪಡೆದು ಲೋಕಾಯುಕ್ತರ ಬಲೆಗೆ ಬಿದ್ದ
ನರಗುಂದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲನಾಗಿರುವ ಎನ್.ಡಿ. ಅಲಗುಂದಿ ಶಿವಮೊಗ್ಗ ಜಿಲ್ಲೆಯ ಐಟಿಐ ಪರೀಕ್ಷಾ ಮುಖ್ಯಸ್ಥನಾಗಿ ನೇಮಕಗೊಂಡಿದ್ದರು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಕೊಡಿಸುವ ಆಮಿಷವೊಡ್ಡಿ ಅವರಿಂದ ಒಟ್ಟು 30,600 ರು. ಲಂಚವಾಗಿ ಪಡೆಯುವಾಗ ಮಂಗಳವಾರ ಶಿವಮೊಗ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ಕರಿಬಸವನ ಗೌಡ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಬೆಳಿಗ್ಗೆ ನಗರದ ಬಿ.ಹೆಚ್. ರಸ್ತೆಯಲ್ಲಿ ಜೂನಿಯರ್ ಟ್ರೈನಿಂಗ್ ಆಫಿಸರ್ ಆಗಿರುವ ಇರ್ಫಾನ್ ಬೇಗ್ ವಿದ್ಯಾರ್ಥಿಗಳ ಹಣವನ್ನು ಎನ್.ಡಿ. ಅಲಗುಂದಿಗೆ ನೀಡುವಾಗ ಈ ದಾಳಿ ಮಾಡಲಾಗಿದೆ. ಐಟಿಐ ಪರೀಕ್ಷೆಗಳು ನಡೆಯುತ್ತಿದ್ದು, ಈ ಪರೀಕ್ಷಾ ಮುಖ್ಯಸ್ಥನಾಗಿ ಅಲಗುಂದಿ ನರಗುಂದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಹುದ್ದೆಯ ಆಧಾರದ ಮೇಲೆ ನೇಮಕಗೊಂಡಿದ್ದ. ಪರೀಕ್ಷೆಗಳ ಸಂದರ್ಭದಲ್ಲಿ ಪರಿಚಯವಾದ ವಿದ್ಯಾರ್ಥಿಗಳಿಗೆ ಗುಪ್ತವಾಗಿ ಕರೆದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬೇಕಾದರೆ 1800 ರು. ನೀಡಬೇಕು. ಹಣ ನೀಡಿದರೆ, ಹೆಚ್ಚಿನ ಅಂಕ ಪಡೆಯಲು ಸಾಧ್ಯ ಎಂದೆಲ್ಲಾ ಹೇಳಿ, ತನ್ನ ಕೈಕೆಳಗಿನ ಜೂನಿಯರ್ ಟ್ರೈನಿಂಗ್ ಆಫಿಸರ್ ಆಗಿರುವ ಇರ್ಫಾನ್ ಬೇಗ್ರವರಿಗೆ ಹಣ ಸಂಗ್ರಹಿಸಲು ಆದೇಶಿಸಿದ್ದ.
18 ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ ಇರ್ಫಾನ್ ಬೇಗ್ ನೇರವಾಗಿ ಪರೀಕ್ಷಾ ಮುಖ್ಯಸ್ಥ ಎನ್.ಡಿ. ಅಲಗುಂದಿಗೆ ನೀಡದೇ, ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಿದರು. 30,600 ರು. ಅಲಗುಂದಿಗೆ ನೀಡುವಂತೆ ಲೋಕಾಯುಕ್ತ ಪೊಲೀಸರು ಸೂಚಿಸಿದ ನಂತರ ಇರ್ಫಾನ್ ಬೇಗ್ರವರು ಅಲಗುಂದಿಯವರನ್ನು ಬಿ.ಹೆಚ್. ರಸ್ತೆಗೆ ಬರಲು ತಿಳಿಸಿದರು. ಇರ್ಫಾನ್ ಬೇಗ್ ಕರೆಯ ಮೇರೆಗೆ ಬಂದ ಅಲಗುಂದಿ ಕೈಗೆ ಲಂಚದ ಹಣ ನೀಡುವಾಗ ಕರಿಬಸವನಗೌಡ ನೇತೃತ್ವದ ಲೋಕಾಯುಕ್ತ ತಂಡ ರಸ್ತೆಯಲ್ಲಿಯೇ ಅಲಗುಂದಿಯನ್ನು ಬಂಧಿಸಿತು. ನಂತರದಲ್ಲಿ ತನಿಖೆಗೆಂದು ಪಕ್ಕದಲ್ಲಿಯೇ ಇದ್ದ ಹೊಟೇಲ್ ಸಾಮ್ರಾಟ್ ಅಶೋಕಕ್ಕೆ ಕರೆದೊಯ್ದಿತು.
ಎನ್.ಡಿ. ಅಲಗುಂದಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದರು.