ವಾಟಾಳ್ ಅಸ್ವಸ್ಥ, ಹಾಸನ ಆಸ್ಪತ್ರೆಗೆ ದಾಖಲು
ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದಿದ್ದ ವಾಟಾಳ್ ಅವರನ್ನು ಚನ್ನರಾಯಪಟ್ಟಣದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶನಿವಾರ ಬಂಧನಕ್ಕೊಳಪಡಿಸಿದ್ದರು.
ತೀವ್ರ ರಕ್ತದೊತ್ತಡ ಮತ್ತು ಮಧುಮೇಹಗಳಿಂದ ಬಳಲುತ್ತಿರುವ 60 ವರ್ಷ ವಯಸ್ಸಿನ ವಾಟಾಳ್ ನಾಗರಾಜ್ ಅವರು ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರೊಂದಿಗೆ ಚನ್ನರಾಯಪಟ್ಟಣದಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಚಳವಳಿಗಾರರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವಾಟಾಳ್ ಅವರು ನೀಡಿದ್ದ ಬಂದ್ ಕರೆಗೆ ಕನ್ನಡ ಕಕ್ಷಣಾ ವೇದಿಕೆ ಸೇರಿದಂತೆ ಕೆಲ ಕನ್ನಡಪರ ಸಂಘಟನೆಗಳು ಮಾತ್ರ ಬೆಂಬಲ ವ್ಯಕ್ತಪಡಿಸಿದ್ದವು. ವಿರೋಧ ಪಕ್ಷಗಳು ಮತ್ತು ಸಾಹಿತಿಗಳು ಪ್ರತಿಮೆ ಅನಾವರಣಕ್ಕೆ ಬೆಂಬಲ ಸೂಚಿಸಿದ್ದರಿಂದ ಬಂದ್ ಗೆ ಅಷ್ಟಾಗಿ ಬಲ ಬಂದಿರಲಿಲ್ಲ.
ಮುಂಜಾಗ್ರತಾ ಕ್ರಮವಾಗಿ ವಾಟಾಳ್, ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿದಂತೆ 400ಕ್ಕೂ ಹೆಚ್ಚಿನ ಹೋರಾಟಗಾರರನ್ನು ಶನಿವಾರವೇ ಬಂಧಿಸಿದ್ದರಿಂದ ಬಂದ್ ಬಿಸಿ ಬೆಂಗಳೂರಿಗೆ ತಟ್ಟಿಲ್ಲ. ಬಸ್ ಸಂಚಾರ ಸುಗಮವಾಗಿದ್ದು, ಜನಜೀವನ ಎಂದಿನಂತೆ ಸಾಗಿದೆ.
(ದಟ್ಸ್ ಕನ್ನಡ ವಾರ್ತೆ)