ಜನರಿಗೆ ನ್ಯಾಯದಾನ ಶೀಘ್ರ ದೊರಕಬೇಕು : ಮುಖ್ಯಮಂತ್ರಿ
ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥವಾಗಬೇಕು. ಜನರಿಗೆ ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ನಗರದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿಂದು ರಾಜ್ಯ ಉಚ್ಛ ನ್ಯಾಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ಪರಿಶೀಲನಾ ಸಭೆ ನ್ಯಾಯಾಂಗ ಅಧಿಕಾರಿಗಳಿಗೆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸ್ವಯಂ ಕಾರ್ಯ ಯೋಜನೆ ರೂಪಿಸಿಕೊಳ್ಳಲು ಅನುಕೂಲವಾಗಲಿದ್ದು, ಹೊಸ ವಿಧಾನಗಳ ಮೂಲಕ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ರಾಜ್ಯ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಪಿ.ಡಿ.ದಿನಕರನ್ ಅವರು ಮಾತಾಡುತ್ತಾ, ಪರಿಶೀಲನಾ ಸಭೆ ನ್ಯಾಯಾಂಗ ಅಧಿಕಾರಿಗಳ ತಪ್ಪನ್ನು ತೋರಲು ಅಥವಾ ಕಾರ್ಯಒತ್ತಡ ಹೇರುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿಲ್ಲ, ಬದಲಿಗೆ ಯಾವ ಜನ ಸಾಮಾನ್ಯರಿಂದ ನಾವು ನಮ್ಮ ಜೀವನ ನಿರ್ವಹಣೆಗೆ ವೇತನ ಮುಂತಾದ ಸವಲತ್ತುಗಳನ್ನು ಪಡೆಯುತ್ತೇವೆಯೋ ಅಂತಹ ಜನರ ಅಗತ್ಯತೆಯ ಬಗ್ಗೆ ಕೆಲವರು ಕಣ್ಣು ಮುಚ್ಚಿ ಕುಳಿತಿದ್ದು, ಇಂತಹವರ ಕಣ್ಣನ್ನು ತೆರೆಸುವ ಸಭೆ ಇದಾಗಲಿದೆ ಎಂದರು.
ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಎದುರಾಗಿರುವ ಸವಾಲುಗಳು, ಭವಿಷ್ಯದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಪ್ರತಿಯೊಬ್ಬ ನ್ಯಾಯಾಂಗ ಅಧಿಕಾರಿಗಳು ಸ್ವಯಂ ಯೋಚಿಸುವಂತಾಗಬೇಕು. ಈ ನಿಟ್ಟಿನಲ್ಲಿ ಗುಣಮಟ್ಟ ಆಧಾರಿತ ಕಾರ್ಯ ಯೋಜನೆ ಸಿದ್ದಪಡಿಸುವ ಕುರಿತು ಯೋಚಿಸುವಿಕೆ, ಕಾರ್ಯಯೋಜನೆ ಸಿದ್ದಪಡಿಸುವಿಕೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಇಂದಿನ ಸಭೆಯ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಶುದ್ಧ ಗಾಳಿ , ಶುದ್ಧ ನೀರು ಹೇಗೆ ಜನರಿಗೆ ಅತಿ ಅವಶ್ಯಕವೋ ಹಾಗೆಯೇ ಶುದ್ಧ ನ್ಯಾಯದಾನ ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಆದ್ಯತೆ ಮೇರೆಗೆ ಪ್ರಕರಣಗಳ ಶೀಘ್ರ ಇತ್ಯರ್ಥಗೊಳಿಸುವಿಕೆ, ಪ್ರಕರಣ ಇತ್ಯರ್ಥಕ್ಕೆ ಸಮಯ ನಿಗದಿಗೊಳಿಸುವಿಕೆ ಇವೇ ಮುಂತಾದ ಕಾರ್ಯಯೋಜನೆ ರೂಪಿಸುವ ಹೊಣೆ ನಿಮ್ಮೆಲ್ಲರ ಮೇಲಿದೆ ಎಂದರು. ನ್ಯಾಯಮೂರ್ತಿ ವಿ. ಗೋಪಾಲ ಹೆಗಡೆ ಹಾಗೂ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)